ರೆಡಿಯಾಗಿ ಮದ್ವೆ ಮಂಟಪಕ್ಕೆ ಬರ್ತಿದ್ದ ವರನ ಮೇಲೆ ವಧುವಿನ ಕಡೆಯವ್ರಿಂದ ದಾಳಿ!

Public TV
2 Min Read

– ಮಾರ್ಗಮಧ್ಯೆಯೇ ಕಾರಿನ ಗಾಜು ಪುಡಿಗೈದ್ರು
– ಮಾರಣಾಂತಿಕ ಹಲ್ಲೆಯಿಂದ ವರ ಪಾರು

ತಿರುವನಂಪುರ: ಮದುವೆ ಮಂಟಪಕ್ಕೆ ಬರುತ್ತಿದ್ದ ವರನ ಮೇಲೆ ವಧುವಿನ ಸಂಬಂಧಿಕರೇ ಹಲ್ಲೆ ಮಾಡಿರುವ ಘಟನೆ ಕೋಯಿಕ್ಕೋಡ್ ನಲ್ಲಿ ನಡೆದಿದೆ.

ಈ ಘಟನೆ ಗುರುವಾರ ಸಂಜೆ ಕೀಜರಿಯೂರ್ ನ ಕಣ್ಣೋತ್ ನಲ್ಲಿ ನಡೆದಿದೆ. ನಾಡೆರಿ ಮಂಜಾಲಾದ್ ಮೂಲದ ಕುಞಮೊಹಮ್ಮದ್ ಪುತ್ರ ಮೊಹಮ್ಮದ್ ಸಾಲಿಹ್ (29) ಮೇಲೆ ಈ ಹಲ್ಲೆ ನಡೆದಿದೆ.

ಕೀಝರಿಯೂರಿನ ನಿವಾಸಿ ಯುವತಿಯ ಜೊತೆ ಮೊಹಮ್ಮದ್ ಸಾಲಿಹ್ ಎರಡು ತಿಂಗಳ ಹಿಂದೆಯೇ ರಿಜಿಸ್ಟರ್ ಮದುವೆಯಾಗಿದ್ದನು. ಆ ಬಳಿಕ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಸಲು ಸಾಲಿಹ್ ಕುಟುಂಬ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಾಗಿ ಮಂಟಪ ಕೂಡ ಸಜ್ಜಾಗಿತ್ತು.

ಇತ್ತ ಸಂಪ್ರದಾಯದಂತೆ ವರ ತನ್ನ ಗೆಳೆಯರ ಜೊತೆ ಕಾರಿನಲ್ಲಿ ಮಂಟಪಕ್ಕೆ ತೆರಳುತ್ತಿದ್ದನು. ಈ ವಿಚಾರ ತಿಳಿದ ವಧುವಿನ ಕುಟುಂಬಸ್ಥರು ಮಾರ್ಗಮಧ್ಯೆಯೇ ವರನನ್ನು ತಡೆದಿದ್ದಾರೆ. ವರ ಹಾಗೂ ಆತನ ಗೆಳೆಯರ ಮೇಲೂ ಹಲ್ಲೆ ಮಾಡಿದ್ದಾರೆ.

ಮಚ್ಚಿನಿಂದ ಕಾರಿನ ಗಾಜಿನ ಕಿಟಕಿಯನ್ನು ಪುಡಿಗೈದಿದ್ದಾರೆ. ಅಲ್ಲದೆ ಸಾಲಿಹ್ ಮೇಲೆ ಮಾರಣಾಂತಿಕ ದಾಳಿ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಕಾರನ್ನು ವೇಗವಾಗಿ ಚಲಾಯಿಸಲಾಗಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸಾಲಿಹ್ ಗೆಳೆಯರಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇದಕ್ಕೂ ಮೊದಲು ಕೂಡ ಸಾಲಿಹ್ ಮೇಲೆ ವಧುವಿನ ಕಡೆಯವರು ಹಲ್ಲೆ ಮಾಡಿದ್ದರು. ತೀವ್ರ ವಿರೋಧದ ಮಧ್ಯೆಯೂ ಯುವತಿ ತಾನು ಆತನನ್ನೇ ಮದುವೆಯಾಗುವುದು ಎಂದು ಹೇಳಿ ಸಾಲಿಹ್ ಮನೆಗೆ ಓಡಿಹೋಗಿದ್ದಳು. ಈ ವಿಚಾರ ತಿಳಿದಿದ್ದ ಆಕೆಯ ಕುಟುಂಬಸ್ಥರು ನೇರವಾಗಿ ಸಾಲಿಹ್ ಮನೆಗೆ ದಾಳಿ ಮಾಡಿ ಯುವತಿಯನ್ನು ಅಲ್ಲಿಂದ ಅಪಹರಿಸಿದ್ದರು. ಆದರೆ ಯುವತಿ ಮತ್ತೆ ಸಾಲಿಹ್ ಬಳಿಯೇ ಹೋಗಿದ್ದಳು. ಹೀಗಾಗಿ ಆತನ ಕುಟುಂಬ ಸಂಪ್ರದಾಯದಂತೆ ಮಗನಿಗೆ ಯುವತಿಯನ್ನು ಮದುವೆ ಮಾಡಲು ನಿರ್ಧರಿಸಿತ್ತು.

ಇತ್ತ ಸಂಪ್ರದಾಯದಂತೆ ಮದುವೆ ಮಾಡುತ್ತಿದ್ದಾರೆ ಎಂಬ ವಿಚಾರ ಯುವತಿಯ ಮನೆಯವರಿಗೆ ತಿಳಿಯಿತು. ಇದು ಯುವತಿಯ ಅಂಕಲ್ ಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಯನ್ನು ತಪ್ಪಿಸಲೇಬೇಕೆಂಬ ಹಠದಲ್ಲಿ ಸಾಲಿಹ್ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ಸಂಬಂಧ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆರು ಮಂದಿಯಿಂದ ಈ ದಾಳಿ ನಡೆದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಇನ್ಸ್ ಪೆಕ್ಟರ್ ಕೆಸಿ ಸುಭಾಷ್ ಬಾಬು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *