ರಿಪೋರ್ಟ್ ಬರೋ ಮುನ್ನವೇ ಕರ್ತವ್ಯಕ್ಕೆ ಹಾಜರ್- ಬ್ಯಾಂಕ್ ಸೀಲ್‍ಡೌನ್

Public TV
1 Min Read

ಬಳ್ಳಾರಿ: ಜಿಲ್ಲೆಯ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿ ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿದೆ. ಕೋವಿಡ್ ಟೆಸ್ಟ್ ಮಾಡಿಸಿಕೊಂಡ ವ್ಯಕ್ತಿ ರಿಪೋರ್ಟ್ ಬರದೇ ಇದ್ದರೂ ವ್ಯಕ್ತಿ ಕೆಲಸಕ್ಕೆ ಹಾಜರಾಗುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಆತಂಕ ಉಂಟು ಮಾಡಿದ್ದಾರೆ.

ಜಿಲ್ಲೆಯ ಸಿರಗುಪ್ಪದ ಪಿಎಲ್‍ಡಿ ಬ್ಯಾಂಕ್‍ನ ಮ್ಯಾನೇಜರ್ ಕೋವಿಡ್ ಪರೀಕ್ಷೆ ಮಾಡಿದ್ದು ಆರೋಗ್ಯ ಇಲಾಖೆ ವರದಿ ಕೊಡುವ ಮುಂಚೆಯೇ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಹಿಂದೆ ಇದೇ ಬ್ಯಾಂಕ್‍ನ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಹೀಗಾಗಿ ಬ್ಯಾಂಕ್ ಸಿಬ್ಬಂದಿಗೆ ಎಲ್ಲರಿಗೂ ಪ್ರಾಥಮಿಕ ಸಂಪರ್ಕ ಎಂದು ಕಳೆದ ಮೂರು ದಿನಗಳ ಹಿಂದೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಆದರೆ ಮೂರು ದಿನಗಳ ಅಂತರದಲ್ಲಿ ಬ್ಯಾಂಕ್ ಅಧ್ಯಕ್ಷನ ಮಗನ ಜೊತೆಯಲ್ಲಿ ಬೆಂಗಳೂರು ಸುತ್ತಿ ಬಂದಿದ್ದರು. ಮೇಲಾಗಿ ಇಂದು ಸಹ ಬ್ಯಾಂಕ್ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಇಂದು ಬ್ಯಾಂಕ್ ಮ್ಯಾನೇಜರ್ ವರದಿ ಪಾಸಿಟಿವ್ ಬಂದಿದೆ.

ಕರ್ತವ್ಯಕ್ಕೆ ಹಾಜರಾಗಿದ್ದ ಬ್ಯಾಂಕ್ ಮ್ಯಾನೇಜರ್ ಅವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಕಚೇರಿಯಿಂದಲೇ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಇವರ ಜೊತೆಯಲ್ಲಿ ಸುತ್ತಾಡಿದ ಬ್ಯಾಂಕ್ ಅಧ್ಯಕ್ಷರ ಮಗ ಹಾಗೂ ಕಾರ್ ಚಾಲಕನನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಆರೋಗ್ಯ ಇಲಾಖೆ ಬ್ಯಾಂಕ್ ಸಿಬ್ಬಂದಿಗೆ ಬ್ಯಾಂಕ್‍ನಲ್ಲಿ ಪತ್ತೆಯಾದ ಮೊದಲ ವ್ಯಕ್ತಿಯ ಜೊತೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರ ಸ್ವಾಬ್ ಟೆಸ್ಟ್ ಮಾಡಿ ಹೋಮ್ ಕ್ವಾರಂಟೈನ್ ಮಾಡಿತ್ತು. ಆದರೆ ಆರೋಗ್ಯ ಇಲಾಖೆಯ ನಿಮಯ ಪಾಲನೆ ಮಾಡದೇ ಮ್ಯಾನೇಜರ್ ಬೆಂಗಳೂರು ಸುತ್ತಿ ಬಂದಿದ್ದಾರೆ. ಸದ್ಯ ಬ್ಯಾಂಕ್ ಮ್ಯಾನೇಜರ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ ಐವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಪಿಎಲ್‍ಡಿ ಬ್ಯಾಂಕ್ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *