ರಾಯಚೂರು ಜಿಲ್ಲೆಯಲ್ಲಿ ಜೋರು ಮಳೆ – ನೂರಾರು ಎಕರೆ ಜಮೀನಿಗೆ ನುಗ್ಗಿದ ನೀರು

Public TV
1 Min Read

ರಾಯಚೂರು: ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಅಲ್ಲಲ್ಲಿ ಅವಾಂತರಗಳನ್ನ ಸೃಷ್ಟಿಸಿದೆ. ಮಸ್ಕಿ ತಾಲೂಕಿನ ಗೋನವಾರ ಗ್ರಾಮದಲ್ಲಿ ಕೆರೆ ಕೊಡಿ ಒಡೆದು ರೈತರ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ನಾಟಿ ಮಾಡಿದ್ದ ಭತ್ತದ ಬೆಳೆ ನೀರುಪಾಲಾಗಿದೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಗೋನವಾರ ಕೆರೆ ಭರ್ತಿಯಾಗಿತ್ತು. ಕೆರೆಗೆ ಹೆಚ್ಚು ಪ್ರಮಾಣದ ನೀರು ಹರಿದು ಬಂದಿದ್ದರಿಂದ ಕೆರೆಯ ಒಂದು ಭಾಗ ಒಡೆದಿದೆ. ಗ್ರಾಮಕ್ಕೆ ನೀರು ನುಗ್ಗುವ ಆತಂಕದಿಂದ ಕೆರೆಯ ಕೊಡಿಯ ಗಿಡಗಂಟೆಗಳನ್ನ ತೆರವು ಮಾಡಿ ನೀರು ಹೊರಬಿಡಲಾಗಿದೆ. ಗ್ರಾಮಕ್ಕೆ ನೀರು ನುಗ್ಗುವ ಆತಂಕದಲ್ಲಿ ಗ್ರಾಮಸ್ಥರು ಕೆರೆಯ ಒಂದು ಭಾಗದಲ್ಲಿ ಹರಿವು ಮಾಡಿ ನೀರು ಬಿಟ್ಟಿದ್ದರಿಂದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.

ನಾಟಿ ಮಾಡಿದ್ದ ಭತ್ತ ಹಾಗೂ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ತೊಗರಿ ಬೆಳೆಗಳೆಲ್ಲಾ ನೀರು ಪಾಲಾಗಿರುವುದರಿಂದ ಸರ್ವೆ ಮಾಡಿ ಪರಿಹಾರ ನೀಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *