ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಇಂದಿನಿಂದ ಬಸ್ ಓಡಾಟ ಆರಂಭ

Public TV
1 Min Read

– ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಅವಕಾಶ
– ಆಂಧ್ರಪ್ರದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್

ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್‍ಡೌನ್‍ನಲ್ಲಿ ಸಡಿಲಿಕೆಗಳು ಆಗುತ್ತಲೇ ಇವೆ. ಈಗ ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಆರಂಭವಾಗಿದೆ. ಪ್ರಾರಂಭಿಕವಾಗಿ ಮಂತ್ರಾಲಯಕ್ಕೆ ಎರಡು ಬಸ್ ಹಾಗೂ ಆಂಧ್ರಪ್ರದೇಶ ಮಾರ್ಗವಾಗಿ ಬೆಂಗಳೂರಿಗೆ ಒಂದು ಬಸ್ ಬಿಡಲಾಗಿದೆ. ಆದ್ರೆ ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿ ಅನುಮತಿ ಪಡೆದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಆಂಧ್ರಪ್ರದೇಶಕ್ಕೆ ಇಂದು ತೆರಳುವವರು ಯಾರೂ ಇಲ್ಲ. ಸದ್ಯ ರಾಜ್ಯದ ಗಡಿವರೆಗೆ ಮಾತ್ರ ಬಸ್ ಓಡಾಡಲಿದೆ.

ಮಂತ್ರಾಲಯ ಸೇರಿದಂತೆ ಆಂಧ್ರಪ್ರದೇಶದಿಂದ ಬರುವವರಿಗೆ ಹೋಮ್ ಕ್ವಾರಂಟೈನ್ ಮಾಡುವುದರಿಂದಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಇನ್ನೂ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ದರ್ಶನಕ್ಕೆ ಭಕ್ತರಿಗೆ ಇನ್ನೂ ಅವಕಾಶ ನೀಡದ ಹಿನ್ನೆಲೆ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಕಡಿಮೆಯಿದೆ. ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳೆಸಲಿರುವ ಬಸ್‍ಗಳು ಸಿದ್ಧಗೊಂಡಿವೆ.

ಹೊರರಾಜ್ಯಕ್ಕೆ ಬಸ್ ಸಂಚಾರದ ಮೊದಲನೆ ದಿನವಾಗಿರುವುದರಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳಲ್ಲೂ ಸ್ವಲ್ಪ ಗೊಂದಲಗಳಿವೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಹೆಚ್ಚು ಜನ ಮಂತ್ರಾಲಯದಿಂದ ಹತ್ತುತ್ತಾರೆ. ಅವರಿಗೆ ರಿಸರ್ವೆಶನ್ ಇನ್ನೂ ಆರಂಭವಾಗಿಲ್ಲ. ಮಂತ್ರಾಲಯದಿಂದ ಬಾಗಲಕೋಟೆಗೆ ಹೊರಡುವ ಬಸ್ ರಾಯಚೂರಿನಿಂದ ಆರಂಭಿಸಲಾಗಿದೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸವನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *