ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ನೀಡಿ ಜೈ ಶ್ರೀರಾಮ್‌ ಎಂದ ಪ್ರಣೀತಾ

Public TV
1 Min Read

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕೆ ನಟಿ ಪ್ರಣಿತಾ ಸುಭಾಷ್ ಅವರು ಕೈ ಜೋಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣ ಪ್ರಕ್ರಿಯೆ ಭರದಿಂದ ಸಾಗಿದ್ದು, ದೇಶಾದ್ಯಂತ ಹಿಂದೂ ಕಾರ್ಯಕರ್ತರು ಹಾಗೂ ರಾಮ ಭಕ್ತರು ಈ ಅಭಿಯಾನದಲ್ಲಿ ತೊಡಗಿದ್ದಾರೆ. ಇದಕ್ಕೆ ನಟಿ ಪ್ರಣಿತಾ ಸಹ ಕೈ ಜೋಡಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ಟರ್ ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿರುವ ಅವರು, ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಭಾಗವಾಗಿ ಆರಂಭಿಕವಾಗಿ 1 ಲಕ್ಷ ರೂ. ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದೇನೆ. ನೀವೂ ಸಹ ಇದರ ಭಾಗವಾಗಿ ಐತಿಹಾಸಿಕ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ಸಹ ಮಾತನಾಡಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ನಿಧಿ ಸಮರ್ಪಣಾ ಅಭಿಯಾನವನ್ನು ನಡೆಸಲಾಗುತ್ತಿದೆ. ಇದಕ್ಕೆ ನಾನೂ ಸಹ ಕೊಡುಗೆ ನೀಡುತ್ತಿದ್ದೇನೆ. ನೀವೂ ಸಹ ಭಾಗಿಯಾಗಿ ಜೈ ಶ್ರೀರಾಮ್ ಎಂದು ತಿಳಿಸಿದ್ದಾರೆ.

ಪ್ರಣಿತಾ ಸುಭಾಷ್ ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ರಾಮನ ಅವತಾರ, ಬಾಲಿವುಡ್‍ನಲ್ಲಿ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಹಾಗೂ ಹಂಗಾಮಾ-2 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಲ್ಡಿವ್ಸ್ ಟ್ರಿಪ್ ಮುಗಿಸಿರುವ ಪ್ರಣಿತಾ ಫುಲ್ ರೆಸ್ಟ್ ಮೂಡ್‍ನಲ್ಲಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *