ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

Public TV
2 Min Read

ನವದೆಹಲಿ: ಪ್ರಸ್ತುತ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಆದರೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವೆಬ್‍ಸೈಟ್ ನಲ್ಲಿ ಆನ್‍ಲೈನ್ ಮೂಲಕ ಇನ್ನೂ ಹಣ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.

ರಾಮ ಮಂದಿರ ನಿರ್ಮಾಣಕ್ಕೆ ಈ ವರೆಗೆ ಸಂಗ್ರಹವಾಗಿರುವ ಹಣ ಎಷ್ಟು ಎಂದು ಹಲವರು ಪ್ರಶ್ನೆ ಕೇಳುತ್ತಲೇ ಇದ್ದರು. ಇದಕ್ಕೆ ಇದೀಗ ಉತ್ತರ ಸಿಕ್ಕಿದ್ದು, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ದೇಣಿಗೆ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ ಮುಂದಿನ ಜಾಗವನ್ನು ಪಡೆಯುವ ಕುರಿತು ಮಾತುಕತೆ ನಡೆಯುತ್ತಿದ್ದು, ಇನ್ನೂ ನಿರ್ಧಾರವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಕೇವಲ 3 ವರ್ಷದಲ್ಲಿ ಮಂದಿರ ನಿರ್ಮಾಣವಾಗಲಿದೆ. ಮಾರ್ಚ್ 4ರ ವರೆಗೆ ಬ್ಯಾಂಕ್ ರಿಸಿಪ್ಟ್ ಪ್ರಕಾರ 25,000 ಮಿಲಿಯನ್ ರೂ.(2,500 ಕೋಟಿ ರೂ.) ಹಣ ಸಂಗ್ರಹವಾಗಿದೆ. ಇತ್ತೀಚೆಗೆ ಟ್ರಸ್ಟ್ ಹೆಚ್ಚುವರಿ 7,285 ಚ.ಅಡಿಯಷ್ಟು ಭೂಮಿಯನ್ನು ಖರೀದಿಸಿದ್ದು, ಉದ್ದೇಶಿತ ಸಂಕೀರ್ಣದ ಪಕ್ಕದಲ್ಲಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ನೀಡಿದ 70 ಎಕರೆ ಪ್ರದೇಶದ ಪಕ್ಕದಲ್ಲೇ ಈ ಹೊಸ ಭೂಮಿ ಇದೆ ಎಂದು ಅವರು ತಿಳಿಸಿದರು.

ವರದಿಗಳ ಪ್ರಕಾರ ಈ ಜಮೀನು ಸ್ಥಳೀಯ ನಿವಾಸಿಗಳಿಗೆ ಸೇರಿದ್ದು, ಅವರಿಗೆ ಟ್ರಸ್ಟ್‍ನಿಂದ 1 ಕೋಟಿ ರೂ.ನೀಡಲಾಗಿದೆ. ಉದ್ದೇಶಿತ ರಾಮ ಮಂದಿರದ 70 ಎಕರೆ ಜಾಗಕ್ಕಿಂತ ಹೆಚ್ಚುವರಿಯಾಗಿ ಜಮೀನು ಪಡೆದು 107 ಎಕರೆಗೆ ವಿಸ್ತರಿಸಲು ಟ್ರಸ್ಟ್ ಯೋಜನೆ ರೂಪಿಸಿದೆ. ಪ್ರಮುಖ ಮಂದಿರವೂ 5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದ್ದು, ಉಳಿದ 100 ಎಕರಿಗೂ ಹೆಚ್ಚು ಜಾಗವನ್ನು ವಸ್ತುಸಂಗ್ರಹಾಲಯ, ಗ್ರಂಥಾಲಯ, ಯಾಗಶಾಲೆ ಹಾಗೂ ರಾಮನ ಜೀವನದ ವಿವಿಧ ಪ್ರಮುಖ ಘಟನೆಗಳ ಫೋಟೋ ಗ್ಯಾಲರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಬಳಸಿಕೊಳ್ಳಲು ಚಿಂತಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *