ರಾಮ ಮಂದಿರ ಜಮೀನು ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ- ಎಸ್‍ಪಿ, ಆಪ್ ಆರೋಪ

Public TV
2 Min Read

ಲಕ್ನೋ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಜಮೀನು ಖರೀದಿಯ ಸಂದರ್ಭ ನಿಮಿಷಗಳ ಅಂತರದಲ್ಲಿ 2 ಕೋಟಿಯಿಂದ 18 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳು ಸೇರಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಗಂಭೀರವಾಗಿ ಆರೋಪಿಸಿದೆ.

ಈ ಕುರಿತು ಲಕ್ನೋದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸಂಜಯ್ ಸಿಂಗ್ ಮತ್ತು ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳ ವಿರುದ್ಧ ಆರೋಪ ನಡೆಸಿದ್ದಾರೆ. ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ 25,000 ಮಿಲಿಯನ್ ರೂ. ದೇಣಿಗೆ ಸಂಗ್ರಹ: ವಿಎಚ್‍ಪಿ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ಸಿಂಗ್ ಅವರು, ಅಯೋಧ್ಯೆಯಲ್ಲಿ ಸುಮಾರು 5.8ಕೋಟಿ ರೂಪಾಯಿ ಬೆಲೆಯ ಭೂಮಿಯನ್ನು ಕುಸುಮ್ ಪಾಠಕ್ ಮತ್ತು ಹರೀಶ್ ಪಾಠಕ್ ಎಂಬುವವರು ಸುಲ್ತಾನ್ ತಿವಾರಿ ಮತ್ತು ರವಿ ಮೋಹನ್ ತಿವಾರಿ ಎಂಬುವವರಿಗೆ 2 ಕೋಟಿ ಬೆಲೆಗೆ ಕಳೆದ ಮಾರ್ಚ್ 18ರಂದು ಮಾರಾಟಮಾಡಿದ್ದರು. ಬಳಿಕ ಕೇವಲ 5 ನಿಮಿಷ ಕಳೆದ ನಂತರ ಜಮೀನು ಪಡೆದುಕೊಂಡಿದ್ದ ಅನ್ಸಾರಿ ಮತ್ತು ತಿವಾರಿಯವರು ಅದೇ ಭೂಮಿಯನ್ನು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಾರಾಟದ ಮೊತ್ತದಲ್ಲಿ 17 ಕೋಟಿ ರೂಪಾಯಿಗಳನ್ನು ಆರ್‍ಟಿಜಿಎಸ್ ಮೂಲಕ ಪಾವತಿ ಮಾಡಿದ್ದಾರೆ. ಇದಲ್ಲದೇ ಈ ಎರಡೂ ಭೂಮಿ ಖರೀದಿಯ ದಾಖಲಾತಿಗೆ ಸಾಕ್ಷಿಯಾಗಿ ಒಬ್ಬರೇ ಇರುವುದು, ಅದು ಅಯೋಧ್ಯೆಯ ಮೇಯರ್ ರಿಶಿಕೇಶ್ ಉಪಾಧ್ಯ ಮತ್ತು ದೇವಸ್ಥಾನದ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರ, ಸಿಬಿಐ ತನಿಖೆಗೆ ಆದೇಶ ನೀಡಬೇಕು, ಟ್ರಸ್ಟ್ ನ್ನು ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಕೇಸಿನ ಮೇಲೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.  ಇದನ್ನೂ ಓದಿ: ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಹಿರಿಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್ ಭರವಸೆ

ಪವನ್ ಪಾಂಡೆ ಅವರು ಸುದ್ದಿಗೋಷ್ಠಿ ನಡೆಸಿ ಸಂಜಯ್ ಸಿಂಗ್ ಅವರ ಮಾದರಿಯಲ್ಲೇ ಆರೋಪ ನಡೆಸಿದ್ದು, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ 120 ಕೋಟಿ ಜನರಿಗೆ ಅವಮಾನ ಮಾಡಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಬಗ್ಗೆ ಆರೋಪ ಕೇಳಿ ಬರುತ್ತಿದ್ದಂತೆ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರತಿಕ್ರಿಯಿಸಿ, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಟ್ರಸ್ಟ್ ನ ಸಭೆಯ ಬಗ್ಗೆ ನನಗೆ ಸರಿಯಾಗಿ ತಿಳಿದಿದೆ. ಆರೋಪಗಳು ಮಾಡುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ. ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಗಳನ್ನು ಒಳಗೊಂಡಂತೆ 100 ವರ್ಷಗಳಿಂದ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *