ರಾಮಮಂದಿರ ಪರ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶ – ರಾತ್ರೋರಾತ್ರಿ ಮನೆಗೆ ನುಗ್ಗಿ ಅಟ್ಯಾಕ್

Public TV
2 Min Read

ಮಂಗಳೂರು: ದೇಶಾದಾದ್ಯಂತ ಈಗ ರಾಮಮಂದಿರ ನಿರ್ಮಾಣದ ವಿಚಾರದ್ದೇ ಚರ್ಚೆ. ರಾಜ್ಯದಲ್ಲೂ ಅದರ ವಿಚಾರವಾಗಿ ರಾಜಕೀಯ ನಾಯಕರುಗಳು ಪರ ವಿರೋಧ ಮಾತನಾಡಿದ್ದು ಗೋತ್ತೆ ಇದೆ. ಅದರ ಪರಿಣಾಮ ಈಗ ಮೂಲೆ ಮೂಲೆಯಲ್ಲೂ ರಾಮ ಮಂದಿರದ್ದೇ ಸುದ್ದಿಯಾಗುತ್ತಿದೆ. ಇದೀಗ ರಾಮ ಮತ್ತು ರಾಮಮಂದಿರದ ಪರವಾಗಿ ಪೋಸ್ಟ್ ಹಾಕಿದ್ದಕ್ಕೆ ರಾತ್ರೋರಾತ್ರಿ ಮಹಿಳೆಯರಿದ್ದ ಮನೆಗೆ ಯುವಕರ ತಂಡ ಅಟ್ಯಾಕ್ ಮಾಡಲು ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನೆಕ್ಕಿಲಾಡಿಯಲ್ಲಿರುವ ಮುಕುಂದ ಎಂಬವರ ಮನೆಗೆ ಪುಂಡ ಯುವಕರ ತಂಡವೊಂದು ಮಧ್ಯ ರಾತ್ರಿ ಗಲಾಟೆ ಮಾಡಿದೆ. ಮುಕುಂದ ಅವರ ಮಕ್ಕಳು ರಾಮಮಂದಿರದ ವಿಚಾರವಾಗಿ ವಾಟ್ಸಪ್ ಸ್ಟೇಟಸ್ ಮತ್ತು ಪೋಸ್ಟ್ ಹಾಕಿದ್ರು. ಇದಕ್ಕೆ ಕೆರಳಿದ ಮತ್ತೊಂದು ಕೋಮಿನ ಯುವಕರು ಅದಕ್ಕೆ ರಿಪ್ಲೇ ಮಾಡಿದ್ದರು. ಆಗ ಅನ್ಯಧರ್ಮವನ್ನು ಕೂಡ ನಿಂದಿಸಿದ್ದು, ನಂತರ ಎರಡು ಧರ್ಮಗಳ ನಡುವೆ ಪರಸ್ಪರ ನಿಂದನೆ ನಡೆದಿತ್ತು.

ಸಾಮಾಜಿಕ ಜಾಲತಾಣದ ಜಟಾಪಟಿ ಅಲ್ಲಿಗೆ ಮುಗಿದಿರಲಿಲ್ಲ. ರಾತ್ರಿ ವೇಳೆಗೆ ಮುಕುಂದರ ಮನೆಗೆ ಆಗಮಿಸಿದ ಯುವಕರ ತಂಡವೊಂದು ಈ ವಿಚಾರವಾಗಿ ಜಗಳ ತೆಗೆದಿದೆ. ಹೆಣ್ಣು ಮಕ್ಕಳು ಇರುವ ಮನೆಗೆ ನುಗ್ಗಲು ಯತ್ನಿಸಿದೆ. ಈ ಬಗ್ಗೆ ಮುಕುಂದ ಮನೆಯವರು ಉಪ್ಪಿನಂಗಡಿ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಆರೋಪಿಗಳೆಲ್ಲಾ ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

ದಾಳಿಯ ಹಿಂದೆ ಎಸ್‍ಡಿಪಿಐ ಕೈವಾಡ ಅಂದ್ರು ಶೋಭಾ ಕರಂದ್ಲಾಜೆ: ಈ ದಾಳಿಯ ಹಿಂದೆ ಎಸ್.ಡಿ.ಪಿ.ಐ ಪಕ್ಷವಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ. ಅಲ್ಲದೆ ಡಿಐಜಿ ಮತ್ತು ಎಸ್ಪಿಗೆ ಕರೆ ಮಾಡಿ ಈ ಪ್ರಕರಣದ ತನಿಖೆ ಸರಿಯಾಗಿ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಶಂಕಿತರ ಬಂಧನ: ಮೂವರು ಶಂಕಿತ ಆರೋಪಿಗಳನ್ನು ಉಪ್ಪಿನಂಗಡಿ ಪೋಲೀಸರ ತಂಡ ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಸುಳಿವು ಸಿಕ್ಕಿದೆ. ಆದಷ್ಟು ಬೇಗ ಎಲ್ಲಾ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಈ ಪ್ರಕರಣ ರಾಜಕೀಯ ತಿರುವ ಪಡೆದುಕೊಳ್ಳುತ್ತಿದೆ. ರಾಜಕೀಯ ತಿರುವು ಮುಂದೆ ಕೋಮುದ್ವೇಷಕ್ಕೆ ದಾರಿಯಾಗಬಾರದು. ಹೀಗಾಗಿ ಈ ಬಗ್ಗೆ ಸಮಗ್ರ ಮತ್ತು ಶೀಘ್ರ ತನಿಖೆ ಮಾಡಿ ಶಾಂತಿ ಕಾಪಾಡುವುದು ಪೋಲೀಸರ ಜವಾಬ್ದಾರಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *