ರಾಮಮಂದಿರ ಕಟ್ಟಲು ಇದು ಸರಿಯಾದ ಸಮಯವಲ್ಲ: ಶಂಕರಾಚಾರ್ಯ ಸರಸ್ವತಿ

Public TV
2 Min Read

ನವದೆಹಲಿ: ಕೋಟ್ಯಂತರ ಹಿಂದೂಗಳ ಕನಸಿನ ರಾಮಮಂದಿರವನ್ನು ಕಟ್ಟಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿ ಸ್ವಾಮೀಜಿಗಳು ಹೇಳಿದ್ದಾರೆ.

ನೂರಾರು ವರ್ಷಗಳಿಂದ ಹಿಂದೂ ಸಮುದಾಯದ ಕನಸಿನ ದೇವಾಲಯವಾಗಿದ್ದ ರಾಮಮಂದಿರವನ್ನು ಕಟ್ಟಲು ಕಾಲ ಕೂಡಿಬಂದಿದೆ. ಇದಕ್ಕಾಗಿ ಮುಂದಿನ ತಿಂಗಳ ಆಗಸ್ಟ್ 5ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ಆದರೆ ಈ ಪುಣ್ಯಕಾರ್ಯ ಮಾಡಲು ಇದು ಸರಿಯಾದ ಸಮಯವಲ್ಲ ಎಂದು ಶಂಕರಾಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ರಾಮಮಂದಿರ ಶಿಲ್ಯಾನ್ಯಾಸಕ್ಕೆ ಬೆಳ್ಳಿ ಇಟ್ಟಿಗೆ- 50 ಮಂದಿ ವಿವಿಐಪಿಗಳು ಭಾಗಿ ಸಾಧ್ಯತೆ

ನಾವು ಯಾವುದೇ ಸ್ಥಾನವನ್ನು ಅಥವಾ ರಾಮ ಮಂದಿರದ ಟ್ರಸ್ಟಿಯಾಗಲು ಬಯಸುವುದಿಲ್ಲ. ದೇವಾಲಯವನ್ನು ಸರಿಯಾಗಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ. ಆದರೆ ಇದು ಅಶುಭ ಸಮಯ ಈ ಸಮಯದಲ್ಲಿ ಅಡಿಪಾಯ ಹಾಕುವುದು ಬೇಡ ಎಂದು ಹೇಳಿದ್ದಾರೆ. ಆದರೆ ಯಾಕೆ ಅಶುಭ ಸಮಯ ಎಂಬ ಕಾರಣವನ್ನು ಸ್ವಾಮೀಜಿಯವರು ತಿಳಿಸಿಲ್ಲ.

ನಾವು ರಾಮನ ಭಕ್ತರು, ಯಾರೇ ರಾಮನ ದೇವಾಲಯವನ್ನು ನಿರ್ಮಿಸಿದರೂ ನಾವು ಸಂತೋಷ ಪಡುತ್ತೇವೆ. ಆದರೆ ಅದಕ್ಕೆ ಸೂಕ್ತ ದಿನಾಂಕ ಮತ್ತು ಶುಭ ಸಮಯವನ್ನು ಆಯ್ಕೆ ಮಾಡಬೇಕು. ಇದರಲ್ಲಿ ರಾಜಕೀಯ ಇರಬಾರದು. ರಾಜಕೀಯದಿಂದಾಗಿ ಹಿಂದೂಗಳ ಸಮಸ್ಯೆಗಳು ಉಲ್ಭಣವಾಗಬಾರದು. ಸಾರ್ವಜನಿಕರ ಹಣದಿಂದ ಈ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಅವರ ಅಭಿಪ್ರಾಯವನ್ನೂ ಸಹ ಪಡೆಯಬೇಕು ಎಂದು ಶಂಕರಾಚಾರ್ಯ ಸರಸ್ವತಿ ಹೇಳಿದ್ದಾರೆ.

ಕೊರೊನಾ ಕಾರಣದಿಂದ ಎರಡು ತಿಂಗಳು ತಡವಾಗಿದ್ದ ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಗಳು ಅಯೋಧ್ಯೆಯಲ್ಲಿ ಈಗಾಗಲೇ ಶುರುವಾಗಿದೆ. ಆಗಸ್ಟ್ 5ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ, ಆರ್.ಎಸ್.ಎಸ್ ಮೋಹನ್ ಭಗವತ್ ಸೇರಿ 50 ಮಂದಿ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಹೇಳಿಕೊಂಡಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಬಿಜೆಪಿ ಹಿರಿಯ ನಾಯಕರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗುವ ಸಾಧ್ಯತೆಯಿದೆ.

ಆಗಸ್ಟ್ 3ರಿಂದಲೇ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಗಳು ಆರಂಭವಾಗಲಿದೆ. ಕೊರೊನಾ ಕಾರಣದಿಂದ ಅತಿಥಿಗಳ ಪಟ್ಟಿಯನ್ನು ಕಡಿಮೆ ಮಾಡಲಾಗಿದ್ದು, ಅಯೋಧ್ಯೆಯ ವಿವಿಧ ಭಾಗಗಳಲ್ಲಿ ಭಕ್ತರು ಕಾರ್ಯಕ್ರಮ ವೀಕ್ಷಿಸಲು ಸ್ಕ್ರೀನ್‍ಗಳ ವ್ಯವಸ್ಥೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *