ರಾತ್ರಿಯಾಗ್ತಿದ್ದಂತೆ ನಾಪತ್ತೆಯಾಗುವ ಸಿಎಂ, ಹೋಗ್ತಿರುವುದು ಎಲ್ಲಿಗೆ? – ದೆಹಲಿಯಲ್ಲಿ ಬೊಮ್ಮಾಯಿ ನಿಗೂಢ ಹೆಜ್ಜೆ

Public TV
3 Min Read

ಶಬ್ಬೀರ್ ನಿಡಗುಂದಿ

ನವದೆಹಲಿ: ಸಚಿವ ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಲು ದೆಹಲಿಗೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾತ್ರಿಯಾಗುತ್ತಿದ್ದಂತೆ ನಾಪತ್ತೆಯಾಗುತ್ತಿದ್ದಾರೆ. ಹಗಲು ವರಿಷ್ಠರನ್ನು ಭೇಟಿ ಮಾಡುವ ಸಿಎಂ ರಾತ್ರಿಯಾಗುತ್ತಿದ್ದಂತೆ ಕರ್ನಾಟಕ ಭವನಕ್ಕೂ ಆಗಮಿಸದೇ ಮಾಯವಾಗುತ್ತಿದ್ದಾರೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ದೆಹಲಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಮೊದಲ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿದ್ದರು. ಈ ಭೇಟಿ ಬಳಿಕ ಅವರು ರಾತ್ರಿ ನಾಪತ್ತೆಯಾಗಿದ್ದರು. ಕರ್ನಾಟಕ ಭವನದ ಮೂಲಗಳ ಪ್ರಕಾರ ಅವರು ಅಂದು ರಾತ್ರಿ ಒಂದು ಗಂಟೆಗೆ ವಾಪಸ್ ಆಗಿದರಂತೆ.

ಇನ್ನು ಎರಡನೇ ಬಾರಿ ಸಚಿವ ಸಂಪುಟ ರಚನೆಗಾಗಿ ಭಾನುವಾರ ರಾತ್ರಿ ಸಿಎಂ ದೆಹಲಿಗೆ ಬಂದಿದ್ದರು. ಸಿಎಂಗೆ ರಾತ್ರಿ 9:30 ಕ್ಕೆ ಜೆ.ಪಿ ನಡ್ಡಾ ಭೇಟಿಗೆ ಸಮಯ ನೀಡಿದ್ದರು. ಆದರೆ ಕಾರಣಾಂತರದಿಂದ ಆ ಭೇಟಿ ರದ್ದಾಗಿತ್ತು. ಭೇಟಿಯ ಸಮಯ ರದ್ದಾಗುತ್ತಿದ್ದಂತೆ ಸಿಎಂ ಬೊಮ್ಮಾಯಿ ವಿಮಾನ ನಿಲ್ದಾಣದಿಂದ ನೇರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿದ್ದರು. ಜೋಶಿ ಮತ್ತು ಬೊಮ್ಮಾಯಿ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ ಹಿನ್ನಲೆ ಜೋಶಿ ಅವರನ್ನು ತಮ್ಮ ನಿವಾಸಕ್ಕೆ ಕರೆಯ್ದೊದರು ಎನ್ನುವ ಮಾಹಿತಿ ಇದೆ.

ಪ್ರಹ್ಲಾದ್ ಜೋಶಿ ನಿವಾಸಕ್ಕೆ ತೆರಳಿದ್ದ ಸಿಎಂ ಕೆಲಹೊತ್ತಿನ ಚರ್ಚೆ ಬಳಿಕ ತಮ್ಮಗೆ ದೆಹಲಿ ಪೊಲೀಸರು ನೀಡಿದ ಭದ್ರತೆಯನ್ನು ಬಿಟ್ಟು ಕರ್ನಾಟಕ ಭವನದ ಸಾಮಾನ್ಯ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಅಂದು ರಾತ್ರಿ ಕರ್ನಾಟಕ ಭವನಕ್ಕೆ ವಾಪಸ್ ಆದಾಗ ‘ಮಧ್ಯರಾತ್ರಿ’ ಒಂದು ಗಂಟೆಯಾಗಿತ್ತು. ಇದಕ್ಕೆ ಪಬ್ಲಿಕ್ ಟಿವಿ ಬಳಿ ಸಾಕ್ಷ್ಯಗಳಿದೆ.

ಭಾನುವಾರ ತಡರಾತ್ರಿ ಕರ್ನಾಟಕ ಭವನಕ್ಕೆ ಬಂದು ತಂಗಿದ್ದ ಸಿಎಂ ಸೋಮವಾರ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ರಾತ್ರಿ 8:45 ಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದರು. ಚರ್ಚೆ ಬಳಿಕವೂ ಎಸ್ಕಾರ್ಟ್ ಬಿಟ್ಟ ಸಿಎಂ ಮತ್ತೆ ಗೌಪ್ಯ ಸ್ಥಳಕ್ಕೆ ತೆರಳಿದ್ದರು.

ಸೋಮವಾರ ರಾತ್ರಿ ಸಿಎಂ ಕರ್ನಾಟಕ ಭವನಕ್ಕೆ ಬಂದೇ ಇಲ್ಲ. ಭವನದಲ್ಲಿ ಐಷರಾಮಿ, ಸಕಲ ಸೌಲಭ್ಯಗಳಿರುವ ಮುಖ್ಯಮಂತ್ರಿಗಳ ಕೊಠಡಿ ಇದ್ದರು ಅದನ್ನು ಬಳಕೆ ಮಾಡದ ಸಿಎಂ ಖಾಸಗಿ ಸ್ಥಳದಲ್ಲಿ ಉಳಿದುಕೊಂಡಿದ್ದರು. ಸಿಎಂ ತಮ್ಮ ಇಡೀ ರಾತ್ರಿಯನ್ನು ಸಂಸದ ಜಿ.ಎಂ ಸಿದ್ದೇಶ್ವರ ನಿವಾಸದಲ್ಲಿ ಕಳೆದಿದ್ದರು ಎಂದು ಮೂಲಗಳು ಹೇಳಿವೆ. ನಡ್ಡಾ ನಿವಾಸದಿಂದ ತೆರಳಿದ್ದ ಸಿಎಂ ಸಿದ್ದೇಶ್ವರ ಮನೆಯಲ್ಲಿ ರಾತ್ರಿ ಮಲಗಿದರಂತೆ. ಬೆಳಗ್ಗೆ ಅಲ್ಲೆ ತಯಾರಾಗಿ ಬೊಮ್ಮಾಯಿ ಸಿದ್ದೇಶ್ವರ ನಿವಾಸದಿಂದಲೇ ಸಂಸತ್ ಭವನಕ್ಕೆ ತೆರಳಿದ್ದರು. ಇದನ್ನೂ ಓದಿ:ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ – ಕ್ಯಾಬಿನೆಟ್ ಪಟ್ಟಿ ಫೈನಲ್‍ಗೆ ಕೌಂಟ್‍ಡೌನ್

ಮುಖ್ಯಮಂತ್ರಿಗಳಿಗೆ ಕರ್ನಾಟಕ ಭವನದಲ್ಲಿ ಸಕಲ ಸೌಲಭ್ಯಗಳಿರುವಾಗ ಬೊಮ್ಮಾಯಿ ಮಾತ್ರ ಹೀಗೆ ರಾತ್ರಿಯಾಗುತ್ತಿದ್ದಂತೆ ಗೌಪ್ಯ ಸ್ಥಳಕ್ಕೆ ತೆರಳುತ್ತಿರುವುದೇಕೆ ಎಂದು ದೆಹಲಿಯಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ನಡೆ ಕಂಡು ಕರ್ನಾಟಕ ಭವನದ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಸಿಎಂ ಭೇಟಿಯಾಗಲು ಬರುತ್ತಿರುವ ಶಾಸಕರ, ಸಂಸದರು ಮತ್ತು ದೆಹಲಿಯ ಕನ್ನಡಿಗರು ಸಿಎಂ ಭೇಟಿ ಸಾಧ್ಯವಾಗದೇ ವಾಪಸ್ ತೆರಳುತ್ತಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಷರತ್ತು – ನಾಲ್ವರ ಭವಿಷ್ಯ ಹೈಕಮಾಂಡ್ ಕೈಯಲ್ಲಿ!

ಇನ್ನು ಸಿಎಂಗೆ ಭದ್ರತೆ ನೀಡಲು ಬಂದಿರುವ ದೆಹಲಿ ಪೊಲೀಸ್ ಕಮಾಂಡೊಗಳು ಟೆನ್ಷನ್ ಆಗುತ್ತಿದ್ದಾರೆ. ಪದೇ ಪದೇ ಮುಖ್ಯಮಂತ್ರಿಗಳು ಭದ್ರತೆಯನ್ನು ನಿರಾಕರಿಸಿ ಸಾಮಾನ್ಯ ಕಾರುಗಳಲ್ಲಿ ಗೌಪ್ಯ ಸ್ಥಳಕ್ಕೆ ತೆರಳುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹ ಮಂತ್ರಿಯಾಗಿದ್ದವರು ಭದ್ರತೆಯನ್ನು ಹೀಗೆ ತಾತ್ಸರ ಮಾಡುತ್ತಿದ್ದಾರೆ, ಪ್ರೊಟೊಕಾಲ್ ಉಲ್ಲಂಘಿಸಿ ಓಡಾಡುತ್ತಿದ್ದಾರೆ, ಏನಾದರೂ ಹೆಚ್ಚು ಕಡಿಮಿಯಾದರೆ ಯಾರು ಜವಾಬ್ದಾರಿ ಎಂದು ಗೊಣಗುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಮುಂದೆ ‘ವಿಜಯ’ ಪ್ರಸ್ತಾಪದ ಇನ್‍ಸೈಡ್ ಸ್ಟೋರಿ

ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ರಾತ್ರಿ ಹೊತ್ತು ಹೋಗುತ್ತಿರುವುದು ಎಲ್ಲಿಗೆ, ಮಾಡುತ್ತಿರುವುದು ಏನು? ಎಂದು ದೆಹಲಿ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಮೂಲಗಳ ಪ್ರಕಾರ ದೆಹಲಿಯಲ್ಲಿರುವ ರಾಜ್ಯ ನಾಯಕರ ಪೈಕಿ ತಮ್ಮ ಕೆಲವು ಆಪ್ತ ಸ್ನೇಹಿತರ ಜೊತೆಗೆ ಸಂತೋಷ ಕೂಟದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಸಂಪುಟ ರಚನೆಗೆ ಬಂದಿರುವ ಸಿಎಂ ಕದ್ದು ಮುಚ್ಚಿ ಓಡಾಡುತ್ತಿರುವ ಬೆಳವಣಿಗೆ ತೀವ್ರ ಸ್ವಾರಸ್ಯಕರವಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

Share This Article
Leave a Comment

Leave a Reply

Your email address will not be published. Required fields are marked *