ರಾಜ್ಯ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡ್ತೀನಿ: ಜಯಪ್ರಕಾಶ್ ಹೆಗ್ಡೆ

Public TV
1 Min Read

ಉಡುಪಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಇದೊಂದು ರಾಜಕೀಯೇತರ ಹುದ್ದೆ. ಜವಾಬ್ದಾರಿ ನೀಡಿದ ಸಿಎಂ ಯಡಿಯೂರಪ್ಪ ನವರಿಗೆ ಧನ್ಯವಾದ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ಮಾಡಿ ನಂತರ ಮಾಧ್ಯಮದ ಜೊತೆ ಮಾತನಾಡಿದರು. ಸಮಿತಿಯ ಸದಸ್ಯರ ನೇಮಕಾತಿ ಮುಂದೆ ಆಗಲಿದೆ. ಈ ಹಿಂದಿನ ಎಲ್ಲಾ ವರದಿಗಳನ್ನು ಅಧ್ಯಯನ ಮಾಡುತ್ತೇನೆ. ರಾಜ್ಯಾದ್ಯಂತ ಓಡಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿದ ಮೇಲೆ ಜಯಪ್ರಕಾಶ್ ಹೆಗ್ಡೆಗೆ ಯಾವುದೇ ಅಧಿಕಾರ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, ಅಧಿಕಾರ ಇಲ್ಲದಿದ್ದಾಗಲೂ ನಾನು ಜನರ ಜೊತೆ ಇದ್ದೆ. ಹುದ್ದೆಯಲ್ಲಿ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದೇನೆ. ಜನರ ಕೆಲಸ ಮಾಡಲು ಹುದ್ದೆಯೇ ಬೇಕಾಗಿಲ್ಲ ಎಂದರು.

ಒಂದು ಪಕ್ಷದ ಪ್ರತಿನಿಧಿಯಾಗಿ ನಾನು ನೇಮಕವಾಗಿಲ್ಲ. ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡುತ್ತೇನೆ. ರಾಜಕೀಯ ಕೆಲಸಗಳನ್ನು ಶಾಸಕನಾಗಿ ಮಂತ್ರಿಯಾಗಿ ಸಂಸದನಾಗಿ ಮಾಡಿದ್ದೆ. ಈಗ ರಾಜಕೀಯೇತರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷ ಜಯಪ್ರಕಾಶ್ ಹಗ್ಡೆ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *