ರಾಜ್ಯದ ಹಲವೆಡೆ ವರುಣನ ಅಬ್ಬರ- ಕಲಬುರಗಿಯಲ್ಲಿ ಸಿಡಿಲಿಗೆ ರೈತ ಬಲಿ

Public TV
1 Min Read

– ಹಾವೇರಿಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ಮೂರು ತೆಂಗಿನ ಮರಗಳು

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಿಸಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲಬುರಗಿಯಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದರೆ, ಹಾವೇರಿಯಲ್ಲಿ ಮೂರು ತೆಂಗಿನ ಮರಗಳು ಹೊತ್ತಿ ಉರುದಿವೆ. ಅಲ್ಲದೆ ದಾವಣಗೆರೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ.

ಕಲಬುರಗಿಯಲ್ಲಿ ಗುಡುಗು ಸಹಿತ ಮಳೆ ಸುರಿದಿದ್ದು, ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ. ಭೋಜರಾಜ ಅತನೂರೇ (54) ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಿಡಿಲ ಹೊಡೆತಕ್ಕೆ ರೈತ ಭೋಜರಾಜನ ಬೆನ್ನಿನ ಚರ್ಮ ಕಿತ್ತು, ಮೈ ಮೇಲಿನ ಬಟ್ಟೆ ಸುಟ್ಟು ಹೋಗಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ, ಹರಪ್ಪನಹಳ್ಳಿ ಸೇರಿದಂತೆ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ. ಹರಿಹರದ ಗಂಗನರಸಿ ಸೇರಿದಂತೆ ಹಲವು ಕಡೆ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು, ಶೆಡ್ ಗಳು ನೆಲಸಮವಾಗಿವೆ.

ಹಾವೇರಿ ನಗರದ ಹತ್ತರಗೇರಿ ಓಣಿಯಲ್ಲಿ ಸಿಡಿಲು ಬಡಿದು ಮೂರು ತೆಂಗಿನ ಮರಗಳು ಹೊತ್ತಿ ಉರಿದಿವೆ. ಮೂರು ತೆಂಗಿನ ಮರಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹುಬ್ಬಳ್ಳಿಯಲ್ಲಿ ಸಹ ಧಾರಕಾರ ಮಳೆ ಸುರಿದಿದ್ದು, ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ. ಹಳೆ ಹುಬ್ಬಳ್ಳಿಯ ಗಣೇಶ ನಗರ, ಹೊಸ ಗಬ್ಬೂರ ಬಳಿಯ ಮನೆಗಳಿಗೆ ಹಾಗೂ ಕಾರವಾರ ರಸ್ತೆಯಲ್ಲಿ ಹಲವು ಗ್ಯಾರೇಜ್ ಗಳಿಗೆ ಸಹ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಜಲಾವೃತಗೊಂಡಿವೆ.

ಶಿವಮೊಗ್ಗ ಹಾಗೂ ಮಡಿಕೇರಿ ಸುತ್ತಮುತ್ತ ಸಹ ಭಾರೀ ಮಳೆಯಾಗಿದ್ದು, ಮಡಿಕೇರಿಯ ಕಡಗದಾಳು, ಎವಿಕೊಡಗಿನ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *