ರಾಜ್ಯದಲ್ಲಿ ಕೊರೊನಾ ಸುನಾಮಿ- ಒಂದೇ ದಿನ 44,438 ಜನಕ್ಕೆ ಸೋಂಕು, 239 ಸಾವು

Public TV
2 Min Read

– ಬೆಂಗಳೂರಿನಲ್ಲಿ ಕೊರೊನಾ ರೌದ್ರತಾಂಡವ, 22,112 ಪಾಸಿಟಿವ್
– ಹೆಲ್ತ್ ಬುಲೆಟಿನ್ ಪ್ರಕಾರ ಚಾಮರಾಜನಗರದಲ್ಲಿ 19 ಸಾವು
– 2 ಸಾವಿರದ ಗಡಿ ದಾಟಿದ ಮೈಸೂರು, ತುಮಕೂರು

ಬೆಂಗಳೂರು: ಕೊರೊನಾ ರೌದ್ರ ನರ್ತನ ಮುಂದುವರಿದಿದ್ದು, ಇಂದು 44,438 ಜನಕ್ಕೆ ಸೋಂಕು ತಗುಲಿದ್ದು, 239 ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿತ್ತು ಅನ್ನೋಷ್ಟರಲ್ಲಿ ಮರಣ ಮೃದಂಗದೊಂದಿಗೆ ಸ್ಫೋಟಗೊಂಡಿದೆ.

ಇಂದು 20,901 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,46,303ಕ್ಕೇರಿಕೆ ಕಂಡಿದೆ. ಮೃತರ ಸಂಖ್ಯೆ 16,250ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.80 ಮತ್ತು ಮರಣ ಪ್ರಮಾಣ ಶೇ.0.53ರಷ್ಟಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆಯಲ್ಲಿ ಸರ್ಕಾರ ಇವತ್ತು ಸಹ ಮರೆಮಾಚಿದೆ. ರಾಜ್ಯದಲ್ಲಿ 4,44,734 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ರಾಜಧಾನಿ ಬೆಂಗಳೂರು ಕ್ಷಣ ಕ್ಷಣಕ್ಕೂ ಕೊರೊನಾ ಬಾಹುಗಳಲ್ಲಿ ಬಂಧಿಯಾಗ್ತಿದೆ. ಇಂದು ನಗರದಲ್ಲಿಯೇ 22,112 ಜನರ ದೇಹವನ್ನ ರಾಕ್ಷಸಿ ಕೊರೊನಾ ಹೊಕ್ಕಿದ್ದು, 24 ಗಂಟೆಯಲ್ಲಿ 115 ಜನರ ಉಸಿರನ್ನ ಕಿತ್ತುಕೊಂಡಿದೆ. ಸ್ಮಶಾನ, ಚಿತಾಗಾರಗಳ ಮುಂದಿನ ಅಂಬುಲೆನ್ಸ್ ಗಳ ಸಾಲು, ಕಣ್ಣೀರು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಬೆಂಗಳೂರಿನಲ್ಲಿ 2,94,917 ಸಕ್ರಿಯ ಪ್ರಕರಣಗಳಿವೆ.

ಇಂದು ಒಟ್ಟು 1,49,090 ಸ್ಯಾಂಪಲ್ (ರಾಪಿಡ್ 8,164+ಆರ್ ಟಿಪಿಸಿಆರ್ 1,40,926) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಚಾಮರಾಜನಗರದಲ್ಲಿ ಇಂದು 24 ಕೋವಿಡ್ ರೋಗಿಗಳು ಸಾವನ್ನಪ್ಪಿರುವ ಬಗ್ಗೆ ವರದಿಗಳು ಬಿತ್ತರವಾಗ್ತಿದ್ರೆ, ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ 19 ಎಂದು ದಾಖಲಾಗಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೆಂಗಳೂರು ನಗರ 22,112, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣ ಕನ್ನಡ 793, ದಾವಣಗೆರೆ 104, ಧಾರವಾಡ 1,021, ಗದಗ 191, ಹಾಸನ 1,673, ಹಾವೇರಿ 330, ಕಲಬುರಗಿ 1,083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1,367, ಮೈಸೂರು 2,685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2,361, ಉಡುಪಿ 529, ಉತ್ತರ ಕನ್ನಡ 776, ವಿಜಯಪುರ 274 ಮತ್ತು ಯಾದಗಿರಿಯಲ್ಲಿ 337 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *