ರಾಜರಾಜೇಶ್ವರಿ ಕ್ಷೇತ್ರದಲ್ಲಿ 250 ಕೋಟಿ ರೂ. ಅಕ್ರಮ – ಲೋಕಾಯುಕ್ತಕ್ಕೆ ದೂರು ನೀಡಿದ ಡಿಕೆ ಸುರೇಶ್‌

Public TV
1 Min Read

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ ಲೋಕಾಯುಕ್ತದಲ್ಲಿ ದೂರು ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿ ಎಂಜಿನಿಯರ್‌ಗಳು ಜನವರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆದಿದ್ದಾರೆ. ಒಟ್ಟು 130 ಕಾಮಗಾರಿಗಳ ಒಟ್ಟು 250 ಕೋಟಿ ರೂ. ನಕಲಿ ಬಿಲ್ ಪಡೆದಿದ್ದಾರೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಜನವರಿಯಲ್ಲಿ ಬಿಲ್ ಪಡೆದು ಈಗ ತರಾತುರಿಯಲ್ಲಿ ಕೆಲಸ ಮಾಡಲು ಹೊರಟಿದ್ದಾರೆ. ಬಿಬಿಎಂಪಿ ಎಂಜಿನಿಯರ್‌ಗಳು ಈ ಕೆಲಸ ಮಾಡಿದ್ದಾರೆ, ಎಂಜಿನಿಯರ್‌ಗಳೇ ಇದಕ್ಕೆ ಜವಾಬ್ದಾರರು. ಇದಕ್ಕೂ ಮುನಿರತ್ನ ಅವರಿಗೂ ಯಾವುದೇ ಸಂಬಂಧ ಇಲ್ಲ. ಅವರು ಈಗ ಮಾಜಿ ಶಾಸಕರು. ಆದರೆ ಈ ಬಿಲ್‌ಗಳಿಗೆ ಬಿಬಿಎಂಪಿ ಎಂಜಿನಿಯರ್‌ಗಳೇ ಹೊಣೆ ಎಂದರು.

ನಾನು ಲೋಕಾಯುಕ್ತಕ್ಕೆ ಎಲ್ಲ ದಾಖಲೆಗಳನ್ನು ಕೊಟ್ಟಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಲೂಟಿ ಹೊಡೆದಿದ್ದಾರೆ. ನಾನು ಬರೀ ಆರೋಪ ಮಾಡದೇ ದಾಖಲೆಯನ್ನು ಕೊಟ್ಟಿದ್ದೇನೆ. ಬಿಬಿಎಂಪಿ ಆಯುಕ್ತರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುನಿರತ್ನ ರಾಜೀನಾಮೆ ಕೊಟ್ಟು ಒಂದೂಕಾಲು ವರ್ಷ ಆಗಿದೆ. ಇದರಲ್ಲಿ ಎಂಜಿನಿಯರ್‌ಗಳ ಪಾತ್ರ ಇದೆ ಹೊರತು ಬೇರೆ ಯಾರ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *