ರಾಘಣ್ಣನ ಆರೋಗ್ಯ ವಿಚಾರಿಸಿದ ಜಗ್ಗಣ್ಣ- ವರನಟನ ನೆನಪು ಮೆಲುಕು ಹಾಕಿಕೊಂಡ ನವರಸನಾಯಕ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಸದ್ಯ ವಿಶ್ರಾಂತಿಯಲ್ಲಿದ್ದು, ನಟ ಜಗ್ಗೇಶ್ ಅವರು ರಾಘಣ್ಣ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಈ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿರುವ ನವರಸನಾಯಕ, ಅಣ್ಣನ ಮನೆಗೆ ರಾಘಣ್ಣನ ಆರೋಗ್ಯ ವಿಚಾರಿಸಲು ಹೋದಕ್ಷಣ. ರಾಘಣ್ಣನ ಆತ್ಮೀಯ ಸಹೋದರ ಭಾವ, ಅಣ್ಣನ ಪ್ರೀತಿಯ ಆ ದಿನಗಳು ನೆನಪಿಸಿತು. ನನ್ನ ಮನ ರಾಯರ ಪ್ರಾರ್ಥಿಸಿದ್ದು ಒಂದೆ ರಾಘಣ್ಣನಿಗೆ ಆಯುಷ್ಮಾನ್ಭವ ಆರೋಗ್ಯಂ ಧೇಹಿಮೆ… ಶುಭ ಮಧ್ಯಾಹ್ನ ಎಂದು ಬರೆದುಕೊಂಡಿದ್ದಾರೆ.

ಫೆಬ್ರವರಿ 16ರಂದು ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ವೇಳೆ ರಾಘಣ್ಣ ಅನಾರೋಗ್ಯಕ್ಕೀಡಾಗಿ ನಗರ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಬೆಳಕು’ ಸಿನಿಮಾದ ಮಹೂರ್ತದ ಸಮಯದಲ್ಲಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು. ಹೀಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ರಾಘಣ್ಣ ಎರಡು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಘಣ್ಣ, ನಾನು ಅಂದು ಶೂಟಿಂಗ್ ನಲ್ಲಿದ್ದ ಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗೋದಕ್ಕೆ ಸಾಧ್ಯವಾಗಿದೆ, ಮನೆಯಲ್ಲಿದ್ದಿದ್ದರೆ ಆಗುತ್ತಿರಲಿಲ್ಲ. ಹಾಗಾಗಿ ಬಿಡುವಿಲ್ಲದ ಕೆಲಸದಿಂದ ಆರೋಗ್ಯ ಹದಗೆಟ್ಟಿತು ಎಂಬುದು ಸುಳ್ಳು. ಸದ್ಯ ನಾನು ಆರಾಮವಾಗಿದ್ದು, ಒಂದು ವಾರದಲ್ಲಿ ಮತ್ತೆ ಶೂಟಿಂಗ್ ಪ್ರಾರಂಭಿಸುತ್ತೇನೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *