ರಸ್ತೆ ಬದಿಗೆ ಬರಲು ಹೇಳಿ ಕೊಚ್ಚಿ ಕೊಲೆಗೈದು ಪತ್ನಿಯ ರುಂಡದೊಂದಿಗೆ ಪೊಲೀಸ್ ಠಾಣೆಗೆ ಓಡಿದ!

Public TV
1 Min Read

ಪಾಟ್ನಾ: ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ತನ್ನ ಪತ್ನಿ ರುಂಡ ಚೆಂಡಾಡಿ ಬಳಿಕ ಅದರೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಅಚ್ಚರಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಈ ಘಟನೆ ಬುಕ್ಸರ್ ಜಿಲ್ಲೆಯ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಪುರ ಮಂದಿರದ ಬಳಿ ಇಂದು ನಡೆದಿದೆ. ಕಳೆದ ಮೂರು ವರ್ಷಗಳಿಂದ ಪತಿ, ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದು, ಪ್ರಕರಣ ಕೋರ್ಟ್ ನಲ್ಲಿದೆ. ಇಂದು ಆರೋಪಿ ಪತಿ ಅಲ್ಗು ಯಾದವ್(48) ಹರಿತವಾದ ಆಯುಧದೊಂದಿಗೆ ಪತ್ನಿ ಚಾಂದಿನಿ ದೇವಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಆಕೆಯ ಶಿರಚ್ಛೇದ ಮಾಡಿದ್ದಾನೆ.

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈಯುತ್ತಿರುವುದನ್ನು ಕಣ್ಣಾರೆ ಕಂಡ ಸ್ಥಳೀಯರು ಆತನ ಮೇಲೆ ಕಲ್ಲು ಬಿಸಾಕಿದ್ದಾರೆ. ಆದರೆ ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದ ಪತಿ ತನ್ನ ಪತ್ನಿಯ ಉಸಿರು ನಿಲ್ಲುವವರೆಗೆ ಹಿಗ್ಗಾಮುಗ್ಗ ಕೊಚ್ಚಿದ್ದಾನೆ. ಪತ್ನಿಯನ್ನು ಕೊಲೆಗೈದ ಬಳಿಕ ಆಕೆಯ ರುಂಡದೊಂದಿಗೆ ಆರೋಪಿ ಪೊಲೀಸ್ ಠಾಣೆಗೆ ಓಡಿ ಹೋಗಿ, ಶರಣಾಗಿದ್ದಾನೆ.

2013ರಲ್ಲಿ ಇಬ್ಬರಿಗೆ ಮದುವೆಯಾಗಿದ್ದು, ದಂಪತೊಗೆ ಮಗಳಿದ್ದಾಳೆ. ಚಾಂದಿನಿ ದೇವಿ ಜಾರ್ಖಂಡ್ ನ ಪಕುರ್ ಜಿಲ್ಲೆಯ ನಿವಾಸಿ. ಮದುವೆಯಾದ ಕೆಲ ವರ್ಷಗಳ ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದ್ದು, ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ. ಇವರಿಬ್ಬರ ವಿವಾದ ಕೋರ್ಟ್ ಮೆಟ್ಟಿಲೇರಿದೆ.

ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿರುವ ಪರಿಣಾಮ ಮಹಿಳೆ ಜೀವನ ನಡೆಸಲು ಸ್ಥಳೀಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಆರೋಪಿ ಪತಿ, ಕೋರ್ಟ್ ನಿಂದ ಕೇಸ್ ವಾಪಸ್ ಪಡೆಯುವಂತೆ ಪತ್ನಿಯನ್ನು ಪದೇ ಪದೇ ಪೀಡಿಸುತ್ತಿದ್ದ. ಅಲ್ಲದೆ ನಿನ್ನನ್ನು ನನ್ನ ಮನೆಗೆ ವಾಪಸ್ ಕರೆದುಕೊಂಡು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ಕೂಡ ನೀಡಿದ್ದ. ಆದರೆ ಪತಿಯ ಮಾತಿಗೆ ಪತ್ನಿ ಸೊಪ್ಪು ಹಾಕಿರಲಿಲ್ಲ.

ಇದರಿಂದ ಸಿಟ್ಟಿಗೆದ್ದ ಪತಿ ಅಲ್ಗು, ಮಾಲ್ ನಲ್ಲಿ ಕೆಲಸ ಮಾಡುವ ಪತ್ನಿಗೆ ಇಂದು ಬೆಳಗ್ಗೆ ಕರೆ ಮಾಡಿ ರಸ್ತೆ ಬದಿ ಬರುವಂತೆ ಹೇಳಿದ್ದಾನೆ. ಹೀಗೆ ಬಂದವಳನ್ನು ತನ್ನಲ್ಲಿದ್ದ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *