ಯೋಧ, 6 ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದ ಉಗ್ರ ಮಟಾಷ್

Public TV
2 Min Read

ಶ್ರೀನಗರ: ಕಳೆದ ವಾರ ಯೋಧ ಮತ್ತು 6 ವರ್ಷದ ಬಾಲಕನನ್ನು ಹತ್ಯೆಗೈದ ಉಗ್ರನನ್ನು ಭಾರತೀಯ ಸೇನೆ ಹೊಡೆದು ಹಾಕಿದೆ.

ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಅನಂತ್‍ನಾಗ್‍ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಜವಾನ್ ಮತ್ತು ಆರು ವರ್ಷದ ಬಾಲಕನನ್ನು ಭಯೋತ್ಪಾದಕ ಹತ್ಯೆ ಮಾಡಿದ್ದನು. ಈತನನ್ನು ಗುರುವಾರ ರಾತ್ರಿ ಶ್ರೀನಗರದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಭಾರತೀಯ ಸೇನೆ ಅನಂತ್‍ನಾಗ್‍ನಲ್ಲಿ ಮಂಗಳವಾರ ಉಗ್ರ ಜಾಹಿದ್ ದಾಸ್‍ಗಾಗಿ ಶೋಧಕಾರ್ಯ ನಡೆಸಿತ್ತು. ಆದರೆ ಅಂದು ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ಉಗ್ರನಿಗಾಗಿ ಭಾರತೀಯ ಸೇನೆ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿ.ಆರ್.ಪಿ.ಎಫ್‍ನ ಯೋಧರು ಕಳೆದ ರಾತ್ರಿ ಶ್ರೀನಗರದ ಮಾಲ್‍ಬಾಗ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಕೂಡ ಹುತಾತ್ಮರಾಗಿದ್ದು, ಉಗ್ರನನ್ನು ಕೊಲ್ಲಲಾಗಿದೆ.

ಕಳೆದ ವಾರ ಅನಂತ್‍ನಾಗ್‍ನ ಬಿಜ್ಬೆಹರಾ ಪ್ರದೇಶದ ಪಾಡ್‍ಶಾಹಿ ಬಾಗ್ ಸೇತುವೆ ಬಳಿ ರಸ್ತೆಯಲ್ಲಿ ಉಗ್ರರು ಗುಂಡಿನ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಸಿ.ಆರ್.ಪಿ.ಎಫ್ ಯೋಧ ಹುತಾತ್ಮರಾಗಿದ್ದರು. ಜೊತೆಗೆ ಜೂನ್ 26ರಂದು ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಗುಂಡು ತಗುಲಿ ಆರು ವರ್ಷದ ಬಾಲಕ ನಿಹಾನ್ ಭಟ್ ಮೃತಪಟ್ಟಿದ್ದ. ಈ ಎರಡು ಪ್ರಕರಣದಲ್ಲೂ ಜಾಹಿನ್ ದಾಸ್ ಪ್ರಮುಖ ಆರೋಪಿಯಾಗಿದ್ದ.

ಎರಡು ಘಟನೆಯ ನಂತರ ಜಾಹೀನ್ ದಾಸ್ ಫೋಟೋ ಬಿಡುಗಡೆ ಮಾಡಿದ್ದ ಜಮ್ಮು ಕಾಶ್ಮೀರದ ಪೊಲೀಸರು, ಈತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಉಗ್ರ ಎಂದು ಘೋಷಣೆ ಮಾಡಿತ್ತು. ಜೊತೆಗೆ ಆತನ ಶೋಧಕಾರ್ಯದಲ್ಲಿ ತೊಡಗಿತ್ತು. ಇದಾದ ನಂತರ ಮಂಗಳವಾರ ಜಾಹೀದ್ ದಾಸ್ ಮೇಲೆ ಭಾರತೀಯ ಸೇನೆ ಅಟ್ಯಾಕ್ ಮಾಡಿತ್ತು. ಆದರೆ ಈ ದಾಳಿಯಲ್ಲಿ ಜಾಹೀದ್ ಇಬ್ಬರು ಸಹಚರರು ಬಲಿಯಾಗಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದ ಆದರೆ ಇಂದು ಹತನಾಗಿದ್ದಾನೆ.

ಕಳೆದ ತಿಂಗಳಿನಿಂದ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಸುಮಾರು 48 ಉಗ್ರರನ್ನು ಕೊಲ್ಲಲಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಕಾಶ್ಮೀರದ ಡಿಜಿಪಿ, ದಿಲ್ಭಾಗ್ ಸಿಂಗ್, ಕಳೆದ ಐದಾರು ತಿಂಗಳುಗಳಲ್ಲಿ, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಅವರಲ್ಲಿ 50 ಹೆಚ್ಚು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರು, 20 ಲಷ್ಕರ್-ಎ-ತೈಬಾ ಉಗ್ರರು, 20 ಜೈಶ್-ಎ-ಮೊಹಮ್ಮದ್ ಮತ್ತು ಸಣ್ಣ ಉಗ್ರ ಸಂಘಟನೆಗಳಾದ ಅಲ್-ಬದ್ರ್, ಅನ್ಸಾರ್ ಗಜ್ವಾತುಲ್ ಹಿಂದ್‍ನಿಂದ 20 ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *