ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ – ಮಿತ್ರಮಂಡಳಿಯಲ್ಲಿ ಬಿರುಕು

Public TV
1 Min Read

ಬೆಂಗಳೂರು: ಸಿಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಿರುವ ವಿಚಾರ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲ ಮಿತ್ರಮಂಡಳಿಯಲ್ಲಿ ಬಿರುಕು ಮೂಡಿದೆ.

ಯೋಗೇಶ್ವರ್ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾದರು ಎಂದು ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದರೆ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಯೋಗೇಶ್ವರ್ ಪರ ಬಲವಾಗಿ ಬ್ಯಾಟ್ ಮಾಡಿದ್ದಾರೆ.

ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ. ಮೆಗಾ ಸಿಟಿ ಹೆಸರಿನಲ್ಲಿ 9,731 ಜನರಿಗೆ ಟೋಪಿ ಹಾಕಿದ್ದಾರೆ. ಇಂತಹ ಭ್ರಷ್ಟ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ ಎಂದು ಪರಿಷತ್‌ ಸದಸ್ಯ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಬೆಳಗಾವಿ ಸಾಹುಕಾರ ಮಾತ್ರ ಯೋಗೇಶ್ವರ್ ತ್ಯಾಗವನ್ನು ಸ್ಮರಿಸಿದ್ದಾರೆ.

ಯೋಗೇಶ್ವರ್ ಎಲ್ಲರನ್ನು ಒಗ್ಗೂಡಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಆರೋಗ್ಯ ಹಾಳು ಮಾಡಿಕೊಂಡರು. ಮನೆ ಅಡ ಇಟ್ಟು ಎಂಟಿಬಿ ಬಳಿ 9 ಕೋಟಿ ಸಾಲ ಮಾಡಿಕೊಂಡರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಕಿಡಿಕಾರಿದರು.

ಯೋಗೇಶ್ವರ್‌ ಅವರಿಗೆ ಮಂತ್ರಿ ಸ್ಥಾನ ನೀಡಿದ್ದು ಸರಿಯಿದೆ. ಯಾಕೆಂದರೆ ಈ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ. ವಿಶ್ವನಾಥ್ ಹೇಳಿಕೆಗಳನ್ನು ಆಶೀರ್ವಾದ ಎಂದು ಪರಿಗಣಿಸುತ್ತೇನೆ ಎಂದು ಜಾರಕಿಹೊಳಿ ಸುಮ್ಮನಾದರು.

ಬಿಸಿ ಪಾಟೀಲ್ ಪ್ರತಿಕ್ರಿಯಿಸಿ, ವಿಶ್ವನಾಥ್ ಈ ರೀತಿ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸೋತರೂ ವಿಶ್ವನಾಥ್‍ರನ್ನು ಸಿಎಂ ದೊಡ್ಡ ಮನಸ್ಸು ಮಾಡಿ ಎಂಎಲ್‍ಸಿ ಮಾಡಿದ್ದಾರೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *