ಯುವರಾಜ್‌ ವಿರುದ್ಧ ಜಾತಿ ನಿಂದನೆ ಕೇಸ್‌ ದಾಖಲು

Public TV
1 Min Read

ಹಿಸ್ಸಾರ್‌: ಮಾಜಿ ಆಲ್‌ರೌಂಡರ್‌, ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ವಿರುದ್ಧ ಹರ್ಯಾಣದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಹಲ್ ಅವರನ್ನು ʼಭಂಗಿʼ ಎಂದು ಕರೆದಿದ್ದರು. ಈ ವಿಚಾರಕ್ಕೆ ವಕೀಲ ರಜತ್‌ ಕಾಲ್ಸನ್‌ ದೂರು ನೀಡಿದ್ದರು. ಆದರೆ 8 ತಿಂಗಳ ಬಳಿಕ ಹಿಸ್ಸಾರ್‌ ಜಿಲ್ಲೆಯ ಹಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್‌ 153, 153ಎ, 295, 505 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕೇಸ್‌ ದಾಖಲಾಗಿದೆ.

ಏನಿದು ಪ್ರಕರಣ?
ರೋಹಿತ್‌ ಶರ್ಮಾ ಜೊತೆಗಿನ ಸಂವಾದಲ್ಲಿ ಕುಲದೀಪ್‌ ಮತ್ತು ಯಜುವೇಂದ್ರ ಚಾಹಲ್‌ ಇದ್ದರು. ಮಾತುಕತೆಯ ವೇಳೆ ಯುವರಾಜ್‌ ಚಹಲ್‌ ಅವರನ್ನು ಭಂಗಿ ಎಂದು ಕರೆದಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು.

ವಿವಾದ ಜಾಸ್ತಿ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಯುವರಾಜ್‌ ಸಿಂಗ್‌, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನರ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇನ್ನೂ ಮುಂದುವರೆಸುತ್ತೇನೆ ಎಂದು ಹೇಳಿದ್ದರು.

ಸ್ನೇಹಿತರ ಜೊತೆಗಿನ ಸಂವಾದದ ವೇಳೆ ಅನಗತ್ಯವಾಗಿ ಅಪಾರ್ಥವಾಗಿದೆ. ನಾನು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿಲ್ಲ. ನನ್ನ ಮಾತುಗಳಿಂದ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

ಭಂಗಿ ಪದ ಉತ್ತರ ಭಾರತದ ಕಡೆ ಜಾತಿ ಸೂಚಕ ಪದವನ್ನಾಗಿ ಬಳಸಲಾಗುತ್ತದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ದೂರು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *