ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಲಾಕ್‍ಡೌನ್ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

Public TV
1 Min Read

-ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸುಗಳು ಮಿತಿಮೀರುತ್ತಲೇ ಇವೆ. ಕಳೆದ ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಎರಡಂಕಿಯನ್ನು ದಾಟದ ಮಹಾಮಾರಿ, 7 ದಿನ ಎನ್ನುವಷ್ಟರಲ್ಲೇ 200ರ ಗಡಿಯನ್ನು ದಾಟಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಬೇಕು ಅನ್ನೋ ಕೂಗು ಕೇಳಿಬಂದಿತ್ತು.

ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಶಾಸಕರು ಪರಿಷತ್ ಸದಸ್ಯರು ಲಾಕ್‍ಡೌನ್ ಮಾಡಿದ್ರೆ ಉತ್ತಮ ಎಂದು ಉಸ್ತುವಾರಿ ಸಚಿವರ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಜಿಲ್ಲಾಧಿಕಾರಿ ಮಾತ್ರ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡುವುದಿಲ್ಲ. ಅಷ್ಟಕ್ಕೂ ಲಾಕ್‍ಡೌನ್ ಮಾಡಿದರೆ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ.

ಲಾಕ್‍ಡೌನ್ ಮಾಡಿ ಮತ್ತೆ ಓಪನ್ ಮಾಡಿದಾಗ ಸಹಜವಾಗಿಯೇ ವೈರಸ್ ಹರಡಿಯೇ ಹರಡುತ್ತದೆ. ಜೊತೆಗೆ ಮುಖ್ಯವಾಗಿ ಲಾಕ್ ಡೌನ್ ಮಾಡಿದರೆ ಬಡವರು, ಮಧ್ಯಮ ವರ್ಗದ ಜನರು ತೀವ್ರ ಸಮಸ್ಯೆ ಅನುಭವಿಸಲಿದ್ದಾರೆ. ಹೀಗಾಗಿ ಲಾಕ್ ಡೌನ್ ಮಾಡುವುದಿಲ್ಲ. ಬದಲಾಗಿ ಜಿಲ್ಲೆಗೆ ಹೊಅರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯ, ದೇಶಗಳಿಂದ ಕೊಡಗಿಗೆ ಬರುವವರಿಂದ ಕೊವಿಡ್ ವೈರಸ್ ಹರಡುತ್ತಿದೆ. ಆದ್ದರಿಂದ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ.

ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬರುತ್ತಿವವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡುತ್ತಿದೆ. ಇವರಿಗೆ ಕೈಗೆ ಸೀಲು ಹಾಕಲಾಗುತ್ತಿದ್ದು, ಅಂತಹವರು ಯಾವುದೇ ಕಾರಣಕ್ಕೂ ಹೊರಬರಬಾರದು. ಕೋವಿಡ್ ಲಕ್ಷಣಗಳಿರುವವರು ಹೊರಗೆ ಓಡಾಡುವ ಬದಲು ತಪ್ಪದೆ ಆಸ್ಪತ್ರೆಗೆ ಹೋಗಿ ಪರಿಶೀಲಿಸಿಕೊಳ್ಳಬೇಕು.

ಜನರು ಕೂಡ ಗುಂಪುಗೂಡುವುದನ್ನು ನಿಯಂತ್ರಿಸಬೇಕು ಎಂದಿದ್ದಾರೆ. ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಜಿಲ್ಲೆಯಲ್ಲಿ ಕಫ್ರ್ಯೂ ಜಾರಿ ಮಾಡಲಾಗಿದ್ದು, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *