ಯಾಮಾರಿದ್ರೆ KRS ಡ್ಯಾಂ ಒಡೆದು ಹೋಗುತ್ತೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆತಂಕ

Public TV
1 Min Read

ಮೈಸೂರು: ಶಿವಮೊಗ್ಗದಲ್ಲಿ ನಡೆದ ಗಣಿ ಸ್ಫೋಟದಂತೆ ಮಂಡ್ಯದ ಕೆ.ಆರ್.ಎಸ್ ಡ್ಯಾಂ ಬಳಿಯೂ ಸ್ಫೋಟ ನಡೆಯಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷ್ಣರಾಜ ಸಾಗರ ಅಣೆಕಟ್ಟು ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಡ್ಯಾಂ ನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ ಇಲ್ಲವಾದರೆ ಕೆ ಆರ್ ಎಸ್‍ಗೆ ಅಪಾಯವಿದೆ. ಗಣಿಗಾರಿಕೆ ಮುಂದುವರಿದರೆ ಡ್ಯಾಂ ಒಡೆದು ಹೋಗುತ್ತದೆ. ಈ ಬಗ್ಗೆ ಸರ್ಕಾರದ ಅಂಗಸಂಸ್ಥೆ ವರದಿ ಕೊಟ್ಟಿದೆ. ರಾಜ್ಯ ನೈಸರ್ಗಿಕ ವಿಕೋಪ ತಡೆ ಸಂಸ್ಥೆ ವರದಿ ನೀಡಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಅಕ್ರಮವಾಗಿ ನಡೆಯುವ ಗಣಿಗಾರಿಕೆ ಸಕ್ರಮ ಮಾಡಿಕೊಳ್ಳಿ ಎಂಬ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೂ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಯಡಿಯೂರಪ್ಪ ಅವರದ್ದು ನಾನ್‍ಸೆನ್ಸ್ ಹೇಳಿಕೆ. ಇದು ನಿಜಕ್ಕೂ ನಾಚಿಕೆಗೇಡಿನ ಹೇಳಿಕೆ. ಇದು ಮನೆಗಳ ಅಕ್ರಮ ಸಕ್ರಮ ಯೋಜನೆಯಲ್ಲ ಇದು ಗಣಿಗಾರಿಕೆ ಎಂದ ಅವರು, ಶಿವಮೊಗ್ಗದ ಸ್ಫೋಟಕ್ಕೆ ಸರ್ಕಾರವೇ ಹೊಣೆ ಎಂದು ಗಂಭೀರ ಆರೋಪ ಮಾಡಿದರು.

ಅಕ್ರಮ ಗಣಿಗಾರಿಕೆಯಲ್ಲಿ ಸರ್ಕಾರ ಶಾಮೀಲಾಗಿದೆ. ಅಕ್ರಮ ಗಣಿಗಾರಿಕೆಯನ್ನು ಹೇಗೆ ಸಕ್ರಮ ಮಾಡಬಹುದು..? ಶಿವಮೊಗ್ಗದ ಗಣಿಗಾರಿಕೆಯಲ್ಲಿ ಬಿಜೆಪಿ ಪ್ರಮುಖರಿದ್ದಾರೆ. ಬಂಧಿಸಿರುವ ಆರೋಪಿಗಳಿಗೂ ಸಚಿವ ಈಶ್ವರಪ್ಪ ಮಗನಿಗೆ ಏನು ಸಂಬಂಧ ಇದೆ? ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು. ಅಲ್ಲದೆ 1350 ಕೆಜಿ ಸ್ಪೋಟಕ ಶಿವಮೊಗ್ಗಕ್ಕೆ ಹೇಗೆ ಬಂತು ಎಂದು ಅವರು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *