ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ?, ನೀವೇನು ಬಂಡವಾಳ ಹಾಕಿದ್ದೀರಾ..?- ಪೊಲೀಸರಿಗೆ ವ್ಯಕ್ತಿ ಅವಾಜ್

Public TV
1 Min Read

ಮಂಡ್ಯ: ಸದ್ಯ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಸೋಮಾರದಿಂದ ಮತ್ತೆ 14 ದಿನ ಲಾಕ್ ಡೌನ್ ಹೇರಲಾಗಿದೆ. ಜನ ಹೊರಗಡೆ ಬಾರದಂತೆ ಕರ್ಫ್ಯೂ ಹೇರಿದರೆ ಈ ಮಧ್ಯೆಯೂ ಜನ ಓಡಾಟ ನಡೆಸುತ್ತಿದ್ದಾರೆ. ಅಲ್ಲಲ್ಲಿ ಪೊಲೀಸರು ತಮ್ಮ ಲಾಠಿ ರುಚಿ ತೋರಿಸುತ್ತಿದ್ದಾರೆ. ಅಂತೆಯೇ ಮಂಡ್ಯದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಅವಾಜ್ ಹಾಕಿದ ಪ್ರಸಂಗ ನಡೆದಿದೆ.

ಹೌದು. ಅನಾವಶ್ಯಕವಾಗಿ ಓಡಾಡುತ್ತಿದ್ದವರ ಬೈಕ್ ಕೀ ಕಿತ್ತುಕೊಂಡ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ವ್ಯಕ್ತಿ ಪೊಲೀಸರನ್ನೇ ಪ್ರಶ್ನಿಸಿ ಅವಾಜ್ ಹಾಕಿದ್ದಾರೆ. ಈ ಘಟನೆ ಮಂಡ್ಯದ ನೂರಡಿ ರಸ್ತೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಯಾಕ್ರಿ ಬೈಕ್ ಕೀ ತಗೊತ್ತೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬಂಡವಾಳ ಹಾಕಿದ್ದೀರಾ ಎಂದು ಅವಾಜ್ ಹಾಕಿದ್ದಾನೆ. ವ್ಯಕ್ತಿಯ ಮಾತಿನಿಂದ ಸಿಟ್ಟಾದ ಪೊಲೀಸರು, ಅದಕ್ಕೆ ನೀನು ರಸ್ತೆಯಲ್ಲಿ ನಿಂತು ಕೆಲಸ ಮಾಡು ಬಾ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಹೀಗೆ ಕೆಲ ಕಾಲ ಪೊಲೀಸರು ಮತ್ತು ವ್ಯಕ್ತಿಯ ನಡುವೆ ವಾಗ್ವಾದ ನಡೆದಿದೆ.

ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪಿಎಸ್ ಪಿ ವೆಂಕಟೇಶ್, ನೀನ್ಯಾಕೆ ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗಲೂ ತನ್ನ ಮಾತನ್ನ ಮುಂದುವರಿಸಿದ ವ್ಯಕ್ತಿಯನ್ನ ಜೀಪ್ ಹತ್ತಿಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *