ಮೋಸ ಮಾಡುವ ವ್ಯಕ್ತಿ ನಾನಲ್ಲ – ಆರೋಪ ತಳ್ಳಿ ಹಾಕಿದ ಕೆ.ಮಂಜು

Public TV
2 Min Read

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಪುಟ್ಟರಾಜು ಅವರು ತನ್ನ ಮೇಲೆ ಮಾಡಿರುವ ಆರೋಪವನ್ನು ಕೆ.ಮಂಜು ತಳ್ಳಿ ಹಾಕಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಮಂಜು, ನನ್ನ ಬಳಿ ಅವರು ಹಣ ಪಡೆದಿದ್ದಾರೆ ಹಣ ಕೇಳಿದ್ದಕ್ಕೆ ಬ್ಲಾಕ್ ಮೇಲ್ ಮಾಡ್ತಿದ್ದಾರೆ. ನಿಮ್ಮ ಹಾಗೆ ಮೋಸ ಮಾಡುವ ವ್ಯಕ್ತಿ ನಾನಲ್ಲ. ನಾನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆದಿದ್ದೇನೆ ಎಂದು ಕಿಡಿಕಾರಿದ್ದಾರೆ.

ಹೊಟ್ಟೆಗೆ ಚಿನ್ನ ತಿನ್ನಲ್ಲ ಅನ್ನವನ್ನೇ ತಿಂತೀನಿ. ನಾನು ನಮ್ಮ ಅಪ್ಪನಿಗೆ ಹುಟ್ಟಿರೋದು ಇನ್ನೊಬ್ಬರಿಗೆ ಅಲ್ಲ. ನಿಮ್ಮ ಹಲವು ದಾಖಲೆಗಳು ನನ್ನ ಬಳಿ ಇದೆ. ನಾನು ಕಾನೂನಾತ್ಮಕವಾಗಿ ಹೋರಾಟ ಮಾಡ್ತೀನಿ. ಉತ್ತಮವಾಗಿ ಮಾತನಾಡುವುದನ್ನ ಕಲಿರಿ. ನಾನು ಸ್ನೇಹಕ್ಕೆ ಬೆಲೆ ಕೊಟ್ಟು ನಾನು ಹಣ ನೀಡಿದ್ದೀನಿ ಎಂದು ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಜು ವಿರುದ್ಧ ಆರೋಪವೇನು..?
ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ತಾರಾ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರದ ನಿರ್ಮಾಪಕ ಎಸ್.ಎ ಪುಟ್ಟರಾಜು ಅವರು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 420, 506 ಮತ್ತು 34 ಅಡಿಯಲ್ಲಿ ದೂರು ದಾಖಲಾಗಿದೆ. ಎಫ್‍ಐಅರ್ ನಲ್ಲಿ ಕೆ. ಮಂಜು ಎರಡನೇ ಆರೋಪಿ. ರಾಜಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಕೂಡ ಆರೋಪಿಗಳಾಗಿದ್ದಾರೆ. ಕೆ. ಮಂಜು ವಿರುದ್ಧ 1 ಕೋಟಿ 10.5 ಲಕ್ಷ ಹಣ ಪಡೆದಿವ ಆರೋಪ ಕೇಳಿಬಂದರೆ, ಮತ್ತೊಬ್ಬ ಆರೋಪಿ ರಾಜಗೋಪಾಲ್ 68 ಲಕ್ಷ ಹಣ ಪಡೆದಿದ್ದಾರೆ ಎಂದು ಪುಟ್ಟರಾಜು ತಮ್ಮ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

2018 ರಲ್ಲಿ ಆರೋಪಿ ರಾಜಗೋಪಾಲ್ ಹೊಸಕೋಟೆ (ತಾ) ಸೊಣ್ಣೇನಹಳ್ಳಿ (ಗ್ರಾ) ಸರ್ವೆ ನಂ 7/3 ರ 18.3/4 ಗುಂಟೆ ತನ್ನ ಜಮೀನು ಮಾರುತ್ತಿದ್ದರಂತೆ. ದೂರುದಾರ ಪುಟ್ಟರಾಜು ಅವರು ಆರ್ಟಿಜಿಎಸ್ ನಲ್ಲಿ ಹಣ ನೀಡಿದ್ದಾರಂತೆ. ಮೊದಲು ಎ1 ಆರೋಪಿ ರಾಜಗೋಪಾಲ್ ಗೆ ಆಡ್ವಾನ್ಸ್ ನೀಡಿದ್ದರಂತೆ. ಆದರೆ ಅಷ್ಟರಲ್ಲಿ ಕೆ. ಮಂಜು ತಾನು ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಬಳಿಕ 4 ಮಂದಿ ಸೇರಿ ರಿಜಿಸ್ಟರ್ ಮಾಡಿಕೊಡುವುದಾಗಿ ಹೇಳಿ ಹಣ ಪಡೆದಿದ್ದರಂತೆ. ಆದರೆ 2018ರಲ್ಲೆ ಹಣ ಪಡೆದಿದ್ದರೂ ವಾಪಸ್ ನೀಡದೇ ವಂಚನೆ ಮಾಡಿದ್ದಾರೆ. ಅಲ್ಲದೆ ಈ ಹಣದ ಬಗ್ಗೆ ಮಾತನಾಡಿದ್ರೆ ಬೇರೆ ರೀತಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪುಟ್ಟರಾಜು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *