ಮೊಬೈಲ್ ಪಾಸ್‍ವರ್ಡ್ ಹೇಳದ್ದಕ್ಕೆ 12ನೇ ತರಗತಿಯ ಸ್ನೇಹಿತನನ್ನೇ ಕೊಂದ ಪಾಪಿ

Public TV
1 Min Read

ನವದೆಹಲಿ: ಮೊಬೈಲ್ ಪಾಸ್‍ವರ್ಡ್ ಹೇಳದ್ದಕ್ಕೆ 12ನೇ ತರಗತಿ ವಿದ್ಯಾರ್ಥಿಯನ್ನು 20 ವರ್ಷದ ಸ್ನೇಹಿತನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಾಯವ್ಯ ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ನಡೆದಿದೆ.

12ನೇ ತರಗತಿ ವಿದ್ಯಾರ್ಥಿ ತನ್ನ ಐ ಫೋನ್‍ನ ಪಾಸ್‍ವರ್ಡ್ ಹೇಳಲಿಲ್ಲವೆಂದು ಸ್ನೇಹಿತನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿ ಮಯಾಂಕ್ ಸಿಂಗ್ ಬಿಬಿಎ ವಿದ್ಯಾರ್ಥಿಯಾಗಿದ್ದು, ರೋಹಿಣಿಯ ಮಹಾರಾಜ ಅಗ್ರಸೇನ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಉತ್ತರ ಪ್ರದೇಶದ ಪಿಲ್ಖುವದಲ್ಲಿ ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಂತ್ರಸ್ತ ಯುವಕನ ತಂದೆ ಫ್ಯಾಕ್ಟರಿ ನಡೆಸುತ್ತಿದ್ದು, ಮಗ ಮನೆಗೆ ಮರಳದ್ದನ್ನು ಕಂಡು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಏಪ್ರಿಲ್ 21 ರಂದು ಸಂತ್ರಸ್ತ ಮನೆ ಬಿಟ್ಟು ತೆರಳಿದ್ದ. ಬಳಿಕ ವಾಪಾಸಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಪಿತಾಂಪುರದ ಪಾರ್ಕ್ ಬಳಿಯ ನಿರ್ಜನ ಪ್ರದೇಶದಲ್ಲಿ ಯುವಕನ ದೇಹ ಪತ್ತೆಯಾಗಿರುವ ಬಗ್ಗೆ ಭಾನುವಾರ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೇಹದ ಬಳಿ ದೊಡ್ಡ ಟೆಡ್ಡಿ ಬೀರ್‍ನ್ನು ಸಹ ಇಡಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಡ್ರಗ್ಸ್ ಸಹ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹತ್ತಿರದ ಸ್ಥಳಗಳಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ತನಿಖೆ ವೇಳೆ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಹಾಗೂ ಆರೋಪಿ ಇಬ್ಬರೂ ಪಾರ್ಕ್‍ಗೆ ಪ್ರವೇಶಿಸಿದ್ದನ್ನು ಗಮನಿಸಿದ್ದಾರೆ. ಏಪ್ರಿಲ್ 21ರಿಂದ ಸಿಂಗ್ ಕಾಣೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *