ಮೈಸೂರಿನಲ್ಲಿ ಜಿಟಿಡಿಗೆ ಠಕ್ಕರ್‌ ಕೊಡಲು ಮುಂದಾದ ಎಚ್‌ಡಿಕೆ

Public TV
1 Min Read

ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರಿನತ್ತ ರಾಜಕೀಯ ಕೇಂದ್ರೀಕರಣಗೊಳಿಸುತ್ತಿದ್ದಾರೆ. ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಠಕ್ಕರ್ ಕೊಟ್ಟಿದ್ದ ಎಚ್‌ಡಿ ಕುಮಾರಸ್ವಾಮಿ ಈಗ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮೂಲ್‌) ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರಿಗೆ ಠಕ್ಕರ್‌ ನೀಡಲು ಸಜ್ಜಾಗಿದ್ದಾರೆ.

ಮೈಮುಲ್ ನೇಮಕಾತಿಯಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ. ಇದನ್ನು ನೈತಿಕವಾಗಿ ಎದುರಿಸಲು ಮೈಮುಲ್ ಎಲೆಕ್ಷನ್ ಪ್ರಚಾರಕ್ಕೆ ಇಳಿದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜಿಟಿಡಿ ಬಗ್ಗೆ ಕಿಡಿಕಾರಿದ ಅವರು, ಜಿ.ಟಿ ದೇವೇಗೌಡರು ಎಲ್ಲಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದ ಚಿಹ್ನೆಯಿಂದ ಅವರು ಗೆದ್ದಿರಬಹುದು. ಅವರು ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದರೆ ನಮ್ಮ ಸಭೆಗಳಿಗೆ ಬರುತ್ತಿಲ್ಲ. ನಮ್ಮ ಪಕ್ಷದ ಚಟುವಟಿಕೆಯಿಂದ ದೂರ ಇದ್ದಾರೆ. ಅವರೀಗ ಯಾವ ಪಾರ್ಟಿಯಲ್ಲಿದ್ದಾರೆ ಅಂತ ಅವರೇ ಹೇಳಬೇಕು ಎಂದರು.

ಜಿಟಿಡಿ ಅವರನ್ನು ಪಾರ್ಟಿಯಿಂದ ಉಚ್ಚಾಟಿಸಲು ನಾವು ನಿರ್ಧಾರ ಮಾಡಿಲ್ಲ. ಶನಿವಾರದಿಂದ ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ, ಹುಣಸೂರಿನಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಜಿಟಿಡಿ ಹಿಡಿತದಲ್ಲಿರುವ ಮೈಮೂಲ್ ಚುನಾವಣಾ ಪ್ರಚಾರಕ್ಕೆ ಖುದ್ದು ಎಚ್‍ಡಿಕೆ ಎಂಟ್ರಿ ಆಗುತ್ತಿದ್ದಾರೆ.

ನಾನು ಸದನಕ್ಕೆ ಟಿಎ, ಡಿಎ ಪಡೆಯಲು ಹಾಜರಾಗುವುದಿಲ್ಲ. ಇಲ್ಲಿ ಉತ್ತಮ ಚರ್ಚೆಗಳು ಆಗುತ್ತಿಲ್ಲ. ಇದರಿಂದ ಯಾವುದೇ ಉಪಯೋಗವೂ ಇಲ್ಲ. ಶರ್ಟ್ ಬಿಚ್ಚಿ ನಿಂತುಕೊಳ್ಳುತ್ತಾರೆ. ಇದಕ್ಕೆ ನಾವು ಸದನದಲ್ಲಿರಬೇಕಾ ಎಂದು ಪ್ರಶ್ನಿಸಿದ್ದಾರೆ.

ಸೋಮವಾರ ಸದನಕ್ಕೆ ಹೋಗುತ್ತೇನೆ. ಆದರೆ ಕಚೇರಿಯಲ್ಲೇ ಇರುತ್ತೇನೆ. ಟಿವಿಯಲ್ಲಿ ನೋಡಿ ಚರ್ಚೆ ಉತ್ತಮವಾಗಿದ್ದರೆ ಮಾತ್ರ ಭಾಗಿಯಾಗುತ್ತೇನೆ ಎಂದು ಹೇಳಿದರು.

ಒಕ್ಕಲಿಗರಿಗೆ 500 ಕೋಟಿ ಅಲ್ಲ, 5 ರೂಪಾಯಿ ಸಹ ಕೊಡಲ್ಲ. ಇದು ಕೇವಲ ಪುಸ್ತಕದಲ್ಲಿ ಬರೆದು ಓದಿದ್ದಾರೆ ಎಂದು ಯಡಿಯೂರಪ್ಪ ಬಜೆಟ್‌ ಭಾಷಣದ ವಿರುದ್ಧ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *