ಮೈತ್ರಿಯಿಂದ ಬೇಸರಗೊಂಡ್ರಾ ಮಾಜಿ ಸಿಎಂ? – ‘ಸಿದ್ದರಾಮಯ್ಯ ಮನ್ ಕೀ ಬಾತ್’ನ ಇನ್‍ಸೈಡ್ ಸುದ್ದಿ

Public TV
2 Min Read

ಬೆಂಗಳೂರು: ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಕಾಂಗ್ರೆಸ್ ನಲ್ಲಿ ಹಲವು ಬೆಳವಣಿಗೆಗೆ ಕಾರಣವಾಗುತ್ತಿದೆ. ಪಕ್ಷದೊಳಗಿನ ಆಂತರಿಕ ಗುದ್ದಾಟ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯ ವೈರಾಗ್ಯದ ಬಗ್ಗೆ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

ಜೆಡಿಎಸ್ ಜೊತೆಗಿನ ಮೈತ್ರಿ ಬೆನ್ನಲ್ಲೇ ಅಸಮಾಧಾನಗೊಂಡಿರುವ ಸಿದ್ದರಾಮಯ್ಯನವರು ಮೂರು ದಿನಗಳ ವಿಶ್ರಾಂತಿಗಾಗಿ ಫಾರ್ಮ್ ಹೌಸ್‍ಗೆ ತೆರಳಿದ್ದಾರೆ ಎನ್ನಲಾಗಿದೆ. ಈ ನಡುವೆ ಇದೇ ವಿಚಾರವಾಗಿ ದೆಹಲಿ ನಾಯಕರನ್ನ ಭೇಟಿಯಾಗಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯನವರು ಆಪ್ತರ ಜೊತೆ ರಾಜಕೀಯ ವೈರಾಗ್ಯದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಮನ್ ಕೀ ಬಾತ್: ನಾನು ಸಿಎಂ ಆಗಿದ್ದು ಆಯ್ತು. ಇನ್ನೇನೂ ಆಸೆ ಇಲ್ಲ, ಮಾಡಲು ಇನ್ನೇನಿದೆ. ನಾನು ಕಾಂಗ್ರೆಸ್ ಸೇರಿದ 6 ವರ್ಷದಲ್ಲೇ ಸಿಎಂ ಮಾಡಿದರು. ಅದಕ್ಕಿಂತ ನನಗೆ ಇನ್ನೇನು ಬೇಕು. ಸೋನಿಯಾ ಗಾಂಧಿ ಅವರ ಋಣವನ್ನು ಯಾವತ್ತೂ ಮರೆಯಲ್ಲ ಮತ್ತು ಅವರಿಗೆ ದ್ರೋಹ ಮಾಡಲ್ಲ. ಕಾಂಗ್ರೆಸ್ ಪಕ್ಷ ಉದ್ಧಾರ ಆಗಬೇಕು ಅಂದ್ರೆ ಜೆಡಿಎಸ್‍ನಿಂದ ದೂರ ಇರಬೇಕು. ಆದರೆ ಪದೇ ಪದೇ ನಾವು ಜೆಡಿಎಸ್‍ನವರ ಇಕ್ಕಳದಲ್ಲೇ ಸಿಕ್ಕಿಹಾಕಿಕೊಳ್ತೀವಿ. ಡಿಕೆಶಿ ಪದೇ ಪದೇ ಜೆಡಿಎಸ್‍ಗೆ ಒಳಗೊಳಗೆ ಸಪೋರ್ಟ್ ಮಾಡಿದ್ರೆ ಮೈಸೂರು ಭಾಗದಲ್ಲಿ ಯಾರ ಮೇಲೆ ಹೋರಾಟ ಮಾಡೋದು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಮೈಸೂರು ಮೈತ್ರಿ ಲಡಾಯಿ – ಕೈ ಸದಸ್ಯರಿಂದಲೇ ಡೀಲ್ ಆರೋಪ

ಹಳೇ ಮೈಸೂರು ಭಾಗದಲ್ಲಿ ನಮ್ಮ ಎದುರಾಳಿ ಜೆಡಿಎಸ್, ಆದ್ರೆ ಅವರ ಜೊತೆಯೇ ಹೊಂದಾಣಿಕೆ ಮಾಡಿಕೊಂಡ್ರೆ ಮುಂದೆ ಕಾಂಗ್ರೆಸ್ ಗತಿ ಏನು? ದೇವೇಗೌಡರ ಹತ್ತಿರ ನಾನು ಇದ್ದು ಬಂದಿದ್ದೀನಿ, ಶಿವಕುಮಾರ್ ಗೌಡರ ಟ್ರ್ಯಾಪ್‍ನಲ್ಲಿ ಬೀಳೋದು ಗ್ಯಾರಂಟಿ. ಕುಮಾರಸ್ವಾಮಿಯನ್ನ ಸಮ್ಮಿಶ್ರ ಸರ್ಕಾರ ಇದ್ದಾಗ ನೋಡಿ ಸಾಕಾಗಿಲ್ಲವಾ ಈ ಶಿವಕುಮಾರ್‍ಗೆ? ಒಬ್ಬ ಒಂದೂವರೆ ಜಿಲ್ಲೆ ಲೀಡರ್, ಇನ್ನೊಬ್ಬರು ಮೂರುವರೆ ಜಿಲ್ಲೆ ಲೀಡರ್. ನನಗೂ ಗೊತ್ತು ರಾಜಕೀಯ. ಶಿವಕುಮಾರ್ ನನ್ನ ಕ್ಯಾಬಿನೆಟ್‍ನಲ್ಲಿ ಮಂತ್ರಿಯಾಗಿದ್ದಾಗ ಏನ್ ಮಾಡ್ತಿದ್ದೀಯಾ.. ಏಕೆ ಮಾಡ್ತಿದ್ದೀಯಾ ಅಂತ ನಾನು ಒಂದು ದಿನ ಕೇಳಲಿಲ್ಲ ಎಂದು ಆಪ್ತರ ಬಳಿ ಡಿಕೆ ಶಿವಕುಮಾರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಮೀರ್ ಮೇಲೆ ಸಿದ್ದರಾಮಯ್ಯಗೆ ಪ್ರೀತಿ – ತಿರುಗಿ ಬಿದ್ರಾ ಮುಸ್ಲಿಮ್‌ ನಾಯಕರು

ನನ್ನ ಪಾಡಿಗೆ ನಾನು ಮೈಸೂರಿಗೆ ಹೋಗಿ ಆರಾಮವಾಗಿ ಇರ್ತೀನಿ. ಹೇಗಿದ್ರೂ ಮನೆ ರೆಡಿಯಾಗ್ತಿದೆ. ಮೊಮ್ಮಕ್ಕಳ ಹತ್ತಿರ ಕಾಲ ಕಳೆಯುತ್ತೇನೆ. ನನ್ನ ಮಗನನ್ನೂ ಎಂಎಲ್‍ಎ ಮಾಡಿದ್ದು ಆಯ್ತು.. ಅವನ ಕ್ಷೇತ್ರದಲ್ಲಿ ಅವನು ಇರ್ತಾನೆ. ನನ್ನ ಜೊತೆ ಇರೋರು ಕಮ್ಮಿ ಏನಿಲ್ಲ, ಅವರಿಗೂ ಪೊಲಿಟಿಕಲ್ ಸ್ಟ್ರೆಂಥ್ ಇದೆ. ಸರ್ವೈವ್ ಆಗ್ತಾರೆ. ಯಾವುದೋ ಲೋಕಲ್ ರಾಜಕೀಯದಲ್ಲಿ ನನ್ನನ್ನೇ ರಾಡಿ ಮಾಡೋದಕ್ಕೆ ಹೋದ್ರೆ ನಾನು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *