ಮೃತಪಟ್ಟು ಒಂದು ದಿನವಾದ್ರೂ ಶವ ಕೊಟ್ಟಿಲ್ಲ – ಬರೋಬ್ಬರಿ 9 ಲಕ್ಷ ಬಿಲ್ ಕೊಟ್ಟ ಆಸ್ಪತ್ರೆ

Public TV
2 Min Read

– ಪತ್ನಿಯನ್ನ ಕರ್ಕೊಂಡು ಬರುವಾಗ ಪತಿ ಸಾವು
– ತಂದೆ ಅಂತ್ಯಕ್ರಿಯೆ ಮುಗಿಸಿದ 2 ದಿನಕ್ಕೆ ಮಗ ಸಾವು

ಬೆಂಗಳೂರು: ಕುಟುಂಬಕ್ಕೆ ಮೃತದೇಹ ನೀಡಲು 9 ಲಕ್ಷ ಬಿಲ್ ಮುಂದಿಟ್ಟು ಬೆಂಗಳೂರಿನ ಆಸ್ಪತ್ರೆ ಸತಾಯಿಸಿದ್ದು, ಈಗ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮೃತದೇಹವನ್ನು ನೀಡಲು ಆಸ್ಪತ್ರೆ ಒಪ್ಪಿಕೊಂಡಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 46 ವರ್ಷದ ಮಹಿಳೆ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾರೆ. ಇದೀಗ ಮೃತದೇಹ ಕೊಡಲು ಆಸ್ಪತ್ರೆ ಕುಟುಂಬಕ್ಕೆ 9 ಲಕ್ಷ ಬಿಲ್ ಮುಂದಿಟ್ಟಿದೆ.

ಏನಿದು ಘಟನೆ?
ಜುಲೈ 13 ರಂದು ಉಸಿರಾಟದ ಸಮಸ್ಯೆಯಿಂದ ಮಹಿಳೆಯನ್ನು ಪತಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಆಸ್ಪತ್ರೆಯ ವೈದ್ಯರು, ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಹೃದಯಾಘಾತದಿಂದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲು ಬಂದಿದ್ದ ಪತಿ ಕಾರಿನಲ್ಲೇ ಮೃತಪಟ್ಟಿದ್ದಾರೆ. ನಂತರ ತಂದೆಯ ಅಂತ್ಯಕ್ರಿಯೆ ಮುಗಿಸಿ ಬಂದ ಮಗನಿಗೂ ಹೃದಯಾಘಾತವಾಗಿದೆ.

ಎರಡು ದಿನದ ಬಳಿಕ ಹೃದಯಾಘಾತದಿಂದ ಮಗನೂ ಕೂಡ ಮೃತಪಟ್ಟಿದ್ದಾನೆ. ಇತ್ತ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಕೂಡ ಗುರುವಾರ ಬೆಳಗ್ಗೆ ಸುಮಾರು 8.45ಕ್ಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಆಸ್ಪತ್ರೆಯವರು ಜುಲೈ 12 ರಿಂದಲೂ ಚಿಕಿತ್ಸೆ ನೀಡಿದ್ದೇವೆ ಎಂದು ಕುಟುಂಬಕ್ಕೆ ಬರೋಬ್ಬರಿ 9 ಲಕ್ಷ ಬಿಲ್ ನೀಡಿದ್ದಾರೆ.

ಹಣ ಕೊಟ್ಟು ಮೃತದೇಹ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ಬಿಬಿಎಂಪಿಯವರು ಹೇಳಿದರೆ ಮೃತದೇಹ ನೀಡುವುದುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ಬಿಬಿಎಂಪಿಗೆ ಫೋನ್ ಮಾಡಿದರೆ, ನಾವು ಮಾತನಾಡಿದ್ದೇವೆ ಮೃತದೇಹ ನೀಡುತ್ತಾರೆ. ನೀವು ಮೃತದೇಹ ಪಡೆದುಕೊಳ್ಳಿ ಎಂದು ಅಧಿಕಾರಿಗಳು ಕುಟುಂಬದವರಿಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಗುರುವಾರದಿಂದ ಕುಟುಂಬದವರು ಮೃತದೇಹಕ್ಕಾಗಿ ಆಸ್ಪತ್ರೆ ಮುಂದೆ ಕಾಯುತ್ತಿದ್ದು, ಈಗ ಆಸ್ಪತ್ರೆ ಸಿಬ್ಬಂದಿ ಮೃತದೇಹ ಕೊಡಲು ಒಪ್ಪಿಗೆ ನೀಡಿದ್ದಾರೆ.

ಮಹಿಳೆ ಮೃತಪಟ್ಟ ನಂತರ ಕೋವಿಡ್ ಟೆಸ್ಟ್ ಮಾಡಿದ್ದು, ಮಹಿಳೆಗೆ ಕೊರೊನಾ ಪಾಸಿವಿಟ್ ಇದೆ ಎಂದು ಆಸ್ಪತ್ರೆಯವರು ಹೇಳಿರುವುದಾಗಿ ಕುಟುಂಬದರು ತಿಳಿಸಿದ್ದಾರೆ. ಹಣಕ್ಕಾಗಿ ಒಂದು ದಿನವಾದರೂ ಮೃತದೇಹವನ್ನು ಕೊಡದ್ದಕ್ಕೆ ಮತ್ತು ತಾಯಿಯ ಮುಖವನ್ನು ನೋಡಲು ಮಕ್ಕಳಿಗೆ ಅವಕಾಶ ಮಾಡಿಕೊಡದ್ದಕ್ಕೆ ಆಸ್ಪತ್ರೆ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *