ಮೂರು ದಿನಗಳಲ್ಲಿ ನೋವು ಕಡಿಮೆಯಾಗದಿದ್ರೆ ಸರ್ಜರಿ: ಶರಣ್

Public TV
2 Min Read

ಬೆಂಗಳೂರು: ಆರಂಭದಲ್ಲಿ ನಾನು ಮಸಲ್ ಕ್ಯಾಚಸ್ ಇರಬೇಕು ಎಂದು ಭಾವಿಸಿದ್ದೆ. ಆದರೆ ನಿನ್ನೆ ಸ್ಕ್ಯಾನ್ ಮಾಡಿದ ಬಳಿಕ ಕಿಡ್ನಿ ಸ್ಟೋನ್ ಇರುವುದು ತಿಳಿಯಿತು. ಸಣ್ಣ ಪ್ರಮಾಣದ ಸ್ಟೋನ್ ಇದೆ. ಏನೂ ತೊಂದರೆ ಇಲ್ಲ, ನೋವು ಕಡಿಮೆಯಾಗದಿದ್ದರೆ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸ್ವತಃ ನಟ ಶರಣ್ ಆಸ್ಪತ್ರೆಯ ಬಳಿ ಮಾತನಾಡಿ ತಿಳಿಸಿದ್ದಾರೆ.

ಆಸ್ಪತ್ರೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಆಸ್ಪತ್ರೆಯಲ್ಲಿದ್ದರೂ ಮನಸ್ಸಿರೋದು ಸಿನಿಮಾ ಕಡೆ. ಶನಿವಾರ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು. ನನ್ನ ಜೀವನದಲ್ಲಿಯೇ ಇಂತಹ ನೋವು ಅನುಭವಿಸಿರಲಿಲ್ಲ. ಶೂಟಿಂಗ್‍ಗೆ ಹೋಗಿದ್ದ ವೇಳೆ ವಿಪರೀತ ನೋವು ಕಾಣಿಸಿಕೊಂಡಿತ್ತು. ಹಿಂದಿನ ಎರಡು ದಿನ ನೋವು ಕಾಣಿಸಿಕೊಂಡಿದ್ದರೂ ನನಗೆ ಗೊತ್ತಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡಿದ್ದೆ. ಹೀಗಾಗಿ ನಿನ್ನೆ ನೋವು ಕಾಣಿಸಿಕೊಂಡಾಗಲೂ ಅದಾಗೇ ಹೋಗುತ್ತೆ ಅಂದುಕೊಂಡೆ. ಹಾಗೇ ನೋವು ಮಾಯವಾಯಿತು. ಆದರೆ ಕೆಲವು ಗಂಟೆಗಳ ಬಳಿಕ ಮತ್ತೆ ನೋವು ಕಾಣಿಸಿಕೊಂಡಿತು. ನಂತರ ಅವತಾರ ಪುರುಷ ಟೀಂನವರೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ, ಕಿಡ್ನಿ ಸ್ಟೋನ್ ಆಗಿದೆ ಎಂದು ಸ್ಪಷ್ಟಪಡಿಸಿದರು. ಸಣ್ಣ ಪ್ರಮಾಣದ ಸ್ಟೋನ್ ಆಗಿದೆ. ಸದ್ಯಕ್ಕೆ ಏನೂ ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ. ಮೂರು ದಿನಗಳ ಬಳಿಕ ಕಡಿಮೆ ಆಗದಿದ್ದರೆ, ಸರ್ಜರಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನೆಯವರು ಹಲವು ಬಾರಿ ಹೇಳಿದ್ದರು. ಆದರೂ ನಾನು ನಿರ್ಲಕ್ಷ್ಯ ಮಾಡಿದ್ದೆ. ಇದೀಗ ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಮೂರು ದಿನಗಳ ನಂತರವೂ ಕಡಿಮೆಯಾಗದಿದ್ದರೆ ಸರ್ಜರಿ ಮಾಡುವುದಾಗಿ ತಿಳಿಸಿದ್ದಾರೆ. ಹೆಚ್ಚು ನೀರು ಕುಡಿಯುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶನಿವಾರ ಶರಣ್ ಆರೋಗ್ಯದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದ ನಟಿ, ಸಹೋದರಿ ಶೃತಿ, ಅಣ್ಣನಿಗೆ ದೊಡ್ಡ ಸಮಸ್ಯೆ ಏನು ಆಗಿಲ್ಲ. ಅವತಾರ ಪುರುಷ ಸಿನಿಮಾ ಶೂಟಿಂಗ್ ವೇಳೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಮತ್ತು ಚಿತ್ರೀಕರಣಕ್ಕೆ ಸಮಸ್ಯೆಯಾಗುವ ಹಿನ್ನೆಲೆ ತಮ್ಮ ನೋವನ್ನು ಸೋದರ ಶರಣ್ ಯಾರ ಬಳಿಯೂ ಹೇಳಿ ಕೊಂಡಿರಲಿಲ್ಲ. ಪರೀಕ್ಷೆ ನಡೆಸಿದ ಬಳಿಕ ಕಿಡ್ನಿಯಲ್ಲಿ ಸ್ಟೋನ್ ಇರೋದಾಗಿ ವೈದ್ಯರು ತಿಳಿಸಿದ್ದು, ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಇಂದು ಚಿಕಿತ್ಸೆ ಪಡೆದು ನಾಳೆ ಮನೆಗೆ ಬರಬಹುದು. ತಮ್ಮಿಂದಾಗಿ ಶೂಟಿಂಗ್ ಪೋಸ್ಟ್ ಪೋನ್ ಆಗಿದ್ದಕ್ಕೆ ಶರಣ್ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *