ಮುನಿರತ್ನ ಪರ ಇಂದು ದರ್ಶನ್ ಅಖಾಡಕ್ಕೆ – ಸಾರಥಿಯ ಪ್ರಚಾರ ಎಲ್ಲೆಲ್ಲಿ?

Public TV
2 Min Read

ಬೆಂಗಳೂರು: ಆರ್ ಆರ್ ನಗರ ಕ್ಚೇತ್ರದ ಉಪಚುನಾವಣೆಗೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಕೊಡ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸ್ಯಾಂಡಲ್‍ವುಡ್ ಪ್ರಚಾರ ಕಣಕ್ಕೆ ಧುಮುಕ್ತಿದ್ದಾರೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಇಡೀ ದಿನ ಭರ್ಜರಿ ರೋಡ್ ಶೋ ಮೂಲಕ ಧೂಳೆಬ್ಬಿಸಲಿದ್ದಾರೆ.

ಆರ್ ಆರ್ ನಗರದ ಉಪಚುನಾವಣಾ ಕಣದಲ್ಲಿಂದು ಸ್ಯಾಂಡಲ್‍ವುಡ್ ದಾಸನದ್ದೇ ದರ್ಬಾರ್ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರದ ಅಖಾಡಕ್ಕೆ ನಟ ದರ್ಶನ್ ಧುಮುಕಲಿದ್ದಾರೆ. ಚಂದನವನದ ಸಾರಥಿ ಸಾರಥ್ಯದಲ್ಲಿ ಮತಬೇಟೆ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಇಡೀ ದಿನ ಆರ್ ಆರ್ ನಗರ ವ್ಯಾಪ್ತಿಯ 9 ವಾರ್ಡ್‍ಗಳಲ್ಲಿ ಮುನಿರತ್ನ ಜೊತೆಯಲ್ಲಿ ದರ್ಶನ್ ರೋಡ್ ಶೋ ನಡೆಸಿ ಧೂಳೆಬ್ಬಿಸಲಿದ್ದಾರೆ. ದರ್ಶನ್‍ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್ ಅಶೋಕ್ ಸಾಥ್ ಕೊಡಲಿದ್ದಾರೆ.

ದರ್ಶನ್ ರೋಡ್ ಶೋ ಎಲ್ಲೆಲ್ಲಿ?
* ಬೆಳಗ್ಗೆ 10 ಗಂಟೆ – ಯಶವಂತಪುರ ರೈಲ್ವೆ ನಿಲ್ದಾಣದ ಮುಂಭಾಗದಿಂದ ರೋಡ್ ಶೋ ಶುರು
* ಬೆಳಗ್ಗೆ 11 ಗಂಟೆ – ಜೆ.ಪಿ.ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ ರೋಡ್ ಶೋ
* ಮಧ್ಯಾಹ್ನ 1:15 ಗಂಟೆ – ಜಾಲಹಳ್ಳಿ ವಿಲೇಜ್ ಮೂಲಕವಾಗಿ ರೋಡ್ ಶೋ
* ಮಧ್ಯಾಹ್ನ 2:00 ಗಂಟೆ – ಹೆಚ್‍ಎಂಟಿ, ಪೀಣ್ಯಾ ಮಾರ್ಗವಾಗಿ ಗೊರಗುಂಟೆಪಾಳ್ಯದಲ್ಲಿ ಪ್ರಚಾರ
* ಸಂಜೆ 4:00 ಗಂಟೆ – ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆಯಿಂದ ರೋಡ್ ಶೋ
* ಸಂಜೆ 5:00 ಗಂಟೆ – ಲಗ್ಗೆರೆಯ ಆಲದಮರ ಸರ್ಕಲ್, ಕೊಟ್ಟಿಗೆಪಾಳ್ಯದ ಪೈಪ್‍ಲೈನ್, ಸುಂಕದಕಟ್ಟೆಗಳಲ್ಲಿ ರೋಡ್ ಶೋ
* ಸಂಜೆ 6:00 ಗಂಟೆ – ಕೊಟ್ಟಿಗೆಪಾಳ್ಯದ ಬಿಡಿಎ ಕಾಂಪ್ಲೆಕ್ಸ್‍ವರೆಗೆ ರೋಡ್ ಶೋ
* ರಾತ್ರಿ 8:15 ಗಂಟೆ – ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಯಲ್ಲಿ ರೋಡ್ ಶೋ
* ರಾತ್ರಿ 9:00 ಗಂಟೆ – ರಾಜರಾಜೇಶ್ವರಿನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ

ರೋಡ್‍ಶೋ ಜೊತೆಗೆ ಹಲವು ಕಡೆ ಸಾರಥಿ ಪ್ರಚಾರ ಭಾಷಣ ಸಹ ಮಾಡಲಿದ್ದಾರೆ. ಅಭಿಮಾನಿಗಳ ಬೇಡಿಕೆ ಮೇರೆಗೆ ತಮ್ಮ ಚಿತ್ರಗಳ ಫೇಮಸ್ ಡೈಲಾಗ್‍ಗಳನ್ನೂ ದರ್ಶನ್ ಹೇಳಿ ರಂಜಿಸಲಿದ್ದಾರೆ. ಇಡೀ ದಿನ ಮುನಿರತ್ನ ಪರ ಮತಯಾಚಿಸಲಿರುವ ದರ್ಶನ್ ಇಂದು ಕ್ಷೇತ್ರದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗೋದು ಖಂಡಿತಾ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *