ಮುಂದಿನ ಚುನಾವಣೆ ಜವಾಬ್ದಾರಿ ನನ್ನ ಮೇಲಿದೆ: ಸಿಎಂ ಬಿಎಸ್‍ವೈ

Public TV
1 Min Read

– ರಾಜೀನಾಮೆ ಕೊಡುವ ಪ್ರಸಂಗ ಬಂದಿಲ್ಲ

ನವದೆಹಲಿ: ಮುಂದಿನ ಚುನಾವಣೆಯ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ನೀಡಿದ್ದಾರೆ. ರಾಜೀನಾಮೆ ನೀಡಿದ್ರೆ ಅದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಸದ್ಯ ರಾಜೀನಾಮೆ ಕೊಡುವ ಪ್ರಸಂಗವೂ ಬಂದಿಲ್ಲ ಎಂದು ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಜೆ.ಪಿ.ನಡ್ಡಾ ಭೇಟಿ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಅಧ್ಯಕ್ಷರ ಜೊತೆ ರಾಜ್ಯ ರಾಜಕೀಯ ವಿಷಯಗಳ ಚರ್ಚೆ ನಡೆಯಿತು. ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡಬೇಕು ಎಂದು ಚುನಾವಣೆ ಜವಾಬ್ದಾರಿಯನ್ನು ನೀಡಿದರು. ಇದೇ ಮಾತುಗಳನ್ನು ಪ್ರಧಾನಿಗಳು ನಿನ್ನೆಯ ಭೇಟಿಯಲ್ಲಿ ಹೇಳಿದ್ದರು ಎಂದು ಹೇಳುವ ಮೂಲಕ ಮುಂದಿನ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯಲಿದೆ ಎಂಬ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದರು.

ಒಂದು ವೇಳೆ ರಾಜೀನಾಮೆ ಕೊಟ್ಟಿದ್ರೆ ಮುಚ್ಚಿಡುವ ಪ್ರಶ್ನೆ ಇಲ್ಲ. ರಾಜೀನಾಮೆ ಕುರಿತ ಸುದ್ದಿಗಳಿಗೆ ಯಾವುದೇ ಬೆಲೆ ಇಲ್ಲ. ರಾಜೀನಾಮೆ ನೀಡುವೆ ಅಂತೆಯೂ ಯಾರೂ ನನಗೆ ಹೇಳಿಲ್ಲ. ಹಾಗಾಗಿ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿ ಬಂದು, ಕೇಂದ್ರ ನಾಯಕರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಕೆಲಸಗಳ ಕುರಿತ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೇ ಇಲ್ಲ: ಸಿಎಂ ಯಡಿಯೂರಪ್ಪ

ಕರ್ನಾಟಕ ಭವನದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳು, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅದು ಕೇವಲ ಗಾಳಿ ಸುದ್ದಿ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ನಿನ್ನೆ ಪ್ರಧಾನಿಗಳನ್ನು ಭೇಟಿಯಾಗಿದ್ದು, ಆ ರೀತಿಯ ಮಾತುಕತೆಗಳು ನಡೆದಿಲ್ಲ. ರಾಜ್ಯದ ಅಭಿವೃದ್ಧಿ ಕುರಿತ ಮಾತನಾಡಿದ್ದು, ರಾಜೀನಾಮೆ ನೀಡುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಎಲ್ಲ ಗಾಳಿಸುದ್ದಿಗಳಿಗೆ ಮುಖ್ಯಮಂತ್ರಿಗಳು ತೆರೆ ಎಳೆದರು.

Share This Article
Leave a Comment

Leave a Reply

Your email address will not be published. Required fields are marked *