ಮೀಸೆ ಚಿಗುರುವ ಮುನ್ನವೇ ರೌಡಿಶೀಟರ್ ಎನಿಸಿಕೊಂಡು ಕೊನೆಗೆ ಬೀದಿ ಹೆಣವಾದ

Public TV
2 Min Read

ಮಂಡ್ಯ: ಆತನಿಗೆ ಇನ್ನೂ ಸರಿಯಾಗಿ ಮೀಸೆ ಚುಗುರದ ವಯಸ್ಸು. ಅದಾಗಲೇ ರೌಡಿ ಶೀಟರ್ ಪಟ್ಟ ಕಟ್ಟಿಕೊಂಡಿದ್ದ. ಈ ನಡುವೆ ಪ್ರೀತಿಯ ಬಲೆಗೆ ಬಿದ್ದಿದಾತ, ಹೆಣವಾಗಿರುವ ಘಟನೆ ಮಂಡ್ಯದ ಬಸವನಗುಡಿ ಬಳಿ ನಡೆದಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಮಾರಕಾಸ್ತ್ರಗಳು ಮತ್ತೆ ಝಳಪಿಸಿವೆ. ಮೀಸೆ ಚಿಗುರವ ಮನುನ್ನವೇ ರೌಡಿ ಶೀಟರ್ ಪಟ್ಟಿ ಸೇರಿದ್ದ 20 ವರ್ಷದ ಸುಮಂತ್ ಅಲಿಯಾಸ್ ಕುಳ್ಳಿ ಬರ್ಬರ ಕೊಲೆಯಾಗಿದೆ. ಮಂಡ್ಯದ ಬಸವನಗುಡಿಯ 4ನೇ ಕ್ರಾಸ್ ನಲ್ಲಿ ಸುಮಂತ್‍ನನ್ನು ಅಡ್ಡಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.

ಕೊಲೆಯಾದ ರೌಡಿ ಶೀಟರ್ ಸ್ವರ್ಣಸಂದ್ರ ಬಡಾವಣೆಯ ನಿವಾಸಿಯಾಗಿದ್ದು, ಆತನ ತಂದೆ ಹಾಲು ವ್ಯಾಪಾರಿಯಾಗಿದ್ದಾರೆ. ಹಸುಗಳಿರುವ ಮನೆಗಳಲ್ಲಿ ಹಾಲು ಹಾಕಿಸಿಕೊಂಡು, ಬಳಿಕ ಜನರಿಗೆ ಮಾರಾಟ ಮಾಡುತ್ತಿದ್ದರು. ಮೊನ್ನೆ ಸಂಜೆ ಸುಮಂತ್ ಮನೆಯೊಂದರಲ್ಲಿ ಹಾಲು ಹಾಕಿಸಿಕೊಳ್ಳುತ್ತಿದ್ದ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಮೂವರು ಯುವಕರು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿ ಓಡಲಾರಂಭಿಸಿದ ಸುಮಂತ್ ನನ್ನ 50 ಮೀಟರ್ ದೂರದವರೆಗೆ ಅಡ್ಡಾಡಿಸಿಕೊಂಡು ಹೋಗಿ ಲಾಂಗ್ ನಿಂದ ತಲೆಯ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದಾರೆ. ಅಲ್ಲಿಂದ ಎಸ್ಕೇಪ್ ಆಗಿರುವ ದುಷ್ಕರ್ಮಿಗಳು ಪಕ್ಕದ ರಸ್ತೆಯಲ್ಲಿ ಹೋಂಡಾ ಆಕ್ಟೀವಾ ಸ್ಕೂಟರಿನಲ್ಲಿ ಬರುತ್ತಿದ್ದ ಯುವತಿಗೆ ಲಾಕ್ ತೋರಿಸಿ ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೃತ ಸುಮಂತ್ ಕೊಲೆ ಯತ್ನ ಪ್ರಕರಣದಲ್ಲಿ ಕೆಲವು ತಿಂಗಳ ಹಿಂದಷ್ಟೇ ರೌಡಿ ಶೀಟರ್ ಪಟ್ಟಿ ಸೇರಿದ್ದ. ಈ ನಡುವೆ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಆ ಹುಡುಗಿ ಮನೆ ಬಿಟ್ಟು ಈತನ ಜೊತೆಗೆ ಬಂದಿದ್ದಳು. ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ಮಾಡಿ ಹುಡುಗಿಯನ್ನು ಆಕೆಯ ಮನೆಗೆ ಕಳುಹಿಸಲಾಗಿತ್ತು. ಅದೇ ದ್ವೇಷದ ಮೇಲೆ ಹುಡುಗಿಯ ಸಹೋದರ ಇಬ್ಬರು ಯುವಕರನ್ನು ಕಟ್ಟಿಕೊಂಡು ಬಂದು ಕೊಲೆ ಮಾಡಿದ್ದಾನೆಂದು ಸುಮಂತ್ ತಂದೆ ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಂಡ್ಯ ಎಸ್‍ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳದ ತಂಡ ಕೂಡ ಪರಿಶೀಲನೆ ನಡೆಸಿತು. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣಾ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದು, ಹಳೇ ದ್ವೇಷ, ಪ್ರೇಮ ಪ್ರಕರಣ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.

ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವ ವಯಸ್ಸಿನಲ್ಲಿ ರೌಡಿ ಪಟ್ಟಿಗೆ ಸೇರಿದ್ದ ಯುವಕ ಸರಿಯಾಗಿ ಮೀಸೆ ಚುಗುರುವ ಮುನ್ನವೇ ಬೀದಿಯಲ್ಲಿ ಹೆಣವಾಗಿದ್ದು, ಮುಸ್ಸಂಜೆ ಸಮಯದಲ್ಲಿ ನಡೆದ ಘಟನೆಗೆ ಮಂಡ್ಯ ನಗರ ಬೆಚ್ಚಿಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *