ಮಾಲೀಕರ ಕಿರುಕುಳ- ಬೀದಿಗೆ ಬಿದ್ದ ಪಿಜಿ ನಿವಾಸಿಗಳು

Public TV
2 Min Read

– ಪಿಜಿ ಮಾಲೀಕರ ಘರ್ಜನೆಗೆ ನಡುಗಿದ ಬ್ಯಾಚುಲರ್ಸ್

ಬೆಂಗಳೂರು: ಕೊರೊನಾ ಹೆಮ್ಮಾರಿಗೆ ಇಡೀ ರಾಜ್ಯವೇ ತತ್ತರಿಸಿದೆ. ರಾಜ್ಯಕ್ಕೆ ರಾಜ್ಯವೇ ಲಾಕ್ ಡೌನ್ ನಿಂದ ಸ್ಥಬ್ಧಗೊಂಡಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಬೆಂಗಳೂರಿನಲ್ಲಿ ಪಿಜಿ ಮಾಲೀಕರು ಘರ್ಜಿಸ್ತಿದ್ದಾರೆ. ಪಿಜಿ ನಿವಾಸಿಗಳಿಗೆ ಹಣ ಪಾವತಿ ಮಾಡುವಂತೆ ಕಿರುಕುಳ ನೀಡ್ತಿದ್ದಾರೆ. ಪಿಜಿ ಮಾಲೀಕರ ಕಿರುಕುಳ ವಿರುದ್ಧ ಪಬ್ಲಿಕ್ ಟಿವಿ ಮೆಗಾ ಅಭಿಯಾನ ಶುರು ಮಾಡಿದೆ.

ಹೌದು. ಕೊರೊನಾ ತಂದ ಅವಾಂತರ ಅಷ್ಟಿಷ್ಟಲ್ಲ. ಬೆಂಗಳೂರಿನ ಪಿಜಿಗಳಲ್ಲಿ ನೆಲೆಸಿದ್ದ ಯುವಕ-ಯುವತಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಪಿಜಿ ಮಾಲೀಕರ ಕಿರುಕುಳಕ್ಕೆ ಅಕ್ಷರಶಃ ನಡುಗುತ್ತಿದ್ದಾರೆ. ಲಾಕ್ ಡೌನ್ ಟೈಮಲ್ಲಿ ಎರಡು ತಿಂಗಳ ಪಿಜಿ ಬಾಡಿಗೆ ಕಟ್ಟಲು ಆಗದೇ ಅದೆಷ್ಟೋ ಜನ ಒದ್ದಾಡ್ತಿದ್ದಾರೆ. ಇತ್ತ ಪಿಜಿ ಮಾಲೀಕರು ಮಾನವೀಯತೆಯನ್ನ ಮರೆತು ಹಣ ಕೊಡದಿದ್ರೆ ನಿಮ್ಮ ಲಗೇಜ್ ಗಳನ್ನ ರಸ್ತೆಗೆ ಬಿಸಾಡುತ್ತೇವೆ ಅಂತ ಧಮ್ಕಿ ಹಾಕ್ತಿದ್ದಾರೆ. ಪಿಜಿ ಮಾಲೀಕರ ಈ ಕ್ರೌರ್ಯಕ್ಕೆ ಪಿಜಿ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಲಾಕ್ ಡೌನ್ ಘೋಷಣೆ ಮಾಡಿದ ನಂತರ ಬೆಂಗಳೂರಿನಲ್ಲಿ ಬಿಬಿಎಂಪಿ ಕಮಿಷನರ್, ಪಿಜಿಗಳಲ್ಲಿ ಇರುವವರನ್ನ ಖಾಲಿ ಮಾಡಿ ಮನೆಗಳಿಗೆ ಕಳಿಸುವಂತೆ ಆದೇಶ ಮಾಡಿದರು. ಆ ಟೈಮಲ್ಲಿ ಕೊರೊನಾ ಕ್ರೂರಿಗೆ ಹೆದರಿ ಪಿಜಿಯಲ್ಲಿದ್ದವರು ತಮ್ಮ ತಮ್ಮ ಮನೆ ಸೇರಿದ್ದಾರೆ. ಎರಡು ತಿಂಗಳ ಬಳಿಕ ಲಾಕ್ ಡೌನ್ ಸಡಿಲಿಕೆಯಾಗ್ತಿದ್ದಂತೆ ಮತ್ತೆ ಮರಳಿ ಬೆಂಗಳೂರಿಗೆ ಬಂದಿದ್ದಾರೆ.

ಮರಳಿ ಬೆಂಗಳೂರಿಗೆ ಬರುವಷ್ಟರಲ್ಲಿ ಹಲವರು ತಮ್ಮ ಕೆಲಸವನ್ನು ಕಳೆದುಕೊಂಡರೆ ಕೆಲವರು ವರ್ಕ್ ಫ್ರಂ ಹೋಮ್ ನಲ್ಲಿದ್ದಾರೆ. ಎರಡು ತಿಂಗಳ ಹಣ ಪೇ ಮಾಡೋಕೆ ಆಗಲ್ಲ. ನಮ್ಮ ಕೈಲಾದಷ್ಟು ಪೇ ಮಾಡ್ತೇವೆ ಅಂತ ಮನವಿ ಮಾಡಿಕೊಂಡು ಪಿಜಿ ಮಾಲೀಕರಿಗೆ ಕನಿಕರ ಬರುತ್ತಿಲ್ಲ. ತಾವು ಲಾಸ್ ಆಗಿರೋದನ್ನೇ ವಾದಿಸಿ ಹಣ ಕಟ್ಟುವಂತೆ ಪೀಡಿಸ್ತಿದ್ದಾರೆ.

ಲಾಕ್ ಡೌನ್ ಸ್ಟ್ರೋಕ್ ಗೆ ಈಗಾಗಲೇ ಹಲವರು ಕೆಲಸ ಕಳೆದುಕೊಂಡು ಅಲೆದಾಡ್ತಿದ್ದಾರೆ. ಹುಟ್ಟಿದ ಊರು ಬಿಟ್ಟು ಮಹಾನಗರಿಯಲ್ಲಿ ಕೊರೊನಾ ಮಧ್ಯೆಯೇ ಕಂಪನಿಯಿಂದ ಕಂಪನಿಗಳಿಗೆ ಕೆಲಸಕ್ಕಾಗಿ ಅಲೆದಾಡ್ತಿದ್ದಾರೆ. ಇದ್ಯಾವ ಕನಿಕರವಿಲ್ಲದೇ ಪಿಜಿ ಮಾಲೀಕರು ಘರ್ಜಿಸ್ತಿದ್ದಾರೆ. ಹಣ ನೀಡುವಂತೆ ಕಿರುಕುಳ ಕೊಟ್ಟರೆ ಅಂತವರ ವಿರುದ್ಧ ನಾವು ಕ್ರಮ ಕೈಗೊಳ್ತೇವೆ ಅಂತ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕೂಡ ಪಿಜಿ ನಿವಾಸಿಗಳಿಗೆ ಹಣ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ ಅಂತ ಸೂಚನೆ ನೀಡಿದೆ. ಆದರೆ ಇದನ್ನ ಅಲ್ಲಗೆಳೆದು ಪಿಜಿ ಆಶ್ರಿತರಿಗೆ ಟಾರ್ಚರ್ ನೀಡಲಾಗ್ತಿದೆ. ಮಾನವೀಯತೆ ದೃಷ್ಟಿಯಲ್ಲಿ ಪಿಜಿಯಲ್ಲಿದ್ದವರು ಕೂಡ ತಮ್ಮಿಂದ ಆದಷ್ಟು ಹಣವನ್ನ ಪಿಜಿ ಮಾಲೀಕರಿಗೆ ನೀಡಲು ಸಿದ್ಧರಿದ್ದಾರೆ. ಆದರೆ ಪಿಜಿ ಮಾಲೀಕರು ಇದಕ್ಕೆ ಒಪ್ಪುತ್ತಿಲ್ಲ. ಎಷ್ಟು ತಿಂಗಳು ಖಾಲಿ ಮಾಡಿದ್ರೂ ಅಷ್ಟು ತಿಂಗಳ ಬಾಡಿಗೆಯ ಹಣವನ್ನ ಕೊಡ್ಲೇ ಬೇಕು ಅಂತ ಅವಾಜ್ ಹಾಕ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *