ಮಾರಕಾಸ್ತ್ರಗಳಿಂದ ಹೊಡೆದು ಕಾರು ಚಾಲಕನ ಬರ್ಬರ ಹತ್ಯೆ

Public TV
2 Min Read

– ಅರಿಶಿನ ಕಾರ್ಯಕ್ರಮ ಮುಗಿಸಿ ಮನೆಗೆ ಬಂದಿದ್ದ ವೇಳೆ ಅಟ್ಯಾಕ್
– ಮನೆಯಿಂದ ಹೊರಗೆ ಬಾ ಎಂದು ಕರೆದು ಮಾರಕಾಸ್ತ್ರಗಳಿಂದ ಹಲ್ಲೆ

ಬೆಳಗಾವಿ: ಸಂಬಧಿಕರೊಬ್ಬರ ಅರಿಶಿಣ ಕಾರ್ಯಕ್ರಮ ಮುಗಿಸಿ ಮನೆಗೆ ಸೇರಿದ್ದವನನ್ನು, ಹೊರಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಅಂಬೇಟ್ಕರ್‍ಗಲ್ಲಿಯಲ್ಲಿ ನಡೆದಿದೆ.

ಬರ್ಬರವಾಗಿ ಹತ್ಯೆಯಾಗಿರುವ ವ್ಯಕ್ತಿಯನ್ನು ಜಯಪಾಲ್ ಗರಾನೆ (35) ಎಂದು ಗುರುತಿಸಲಾಗಿದೆ. ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಜಯಪಾಲ್ ಗರಾನೆಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಿದ್ದಾರೆ.

ಪ್ರಕರಣ ಹಿನ್ನೆಲೆ:
ಜಯಪಾಲ್ ಗರಾನೆ ನಿನ್ನೆ ರಾತ್ರಿ ಸಂಬಂಧಿಕರೊಬ್ಬರ ಮದುವೆಯ ಅರಿಶಿಣ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಸರಿಸುಮಾರು ರಾತ್ರಿ ಹನ್ನೆರಡು ಗಂಟೆಗೆ ಸುಮಾರಿಗೆ ಮತ್ತೆ ಮನೆಗೆ ವಾಪಾಸ್ ಬಂದಿದ್ದರು. ಈ ವೇಳೆ ಮನೆಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಬಂದು ಜಯಪಾಲ್‍ನನ್ನು ಹೊರ ಕರೆದಿದ್ದಾರೆ. ತಕ್ಷಣ ಹೊರ ಹೋದ ಜಯಪಾಲ್ ರಾತ್ರಿ ಕಳೆದರೂ ಮನೆಗೆ ವಾಪಸ್ ಬಂದಿಲ್ಲ. ಬಾಡಿಗೆ ಕಾರು ಓಡಿಸುತ್ತಿದ್ದ ಈತನನ್ನ ಯಾರೋ ಅರ್ಜಂಟ್ ಆಗಿ ಕರೆದುಕೊಂಡು ಹೋಗಿರಬಹುದು ಎಂದು ಕುಟುಂಬಸ್ಥರು ಕೂಡ ಸುಮ್ಮನಾಗಿದ್ದಾರೆ. ಆದರೆ ಬೆಳಗ್ಗಿನ ಜಾವ ವಾಕಿಂಗ್ ಮಾಡಲು ಬಂದಿದ್ದ ಜನರು ಜಯಪಾಲ್ ಮನೆಯಿಂದ ನೂರು ಮೀಟರ್ ನಷ್ಟು ದೂರದಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ಹಾಗೂ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಶಹಾಪುರ್ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೇಸ್‍ನ್ನು ದಾಖಲಿಸಿಕೊಂಡಿದ್ದಾರೆ. ಶವವನ್ನ ಪೋಸ್ಟ್ ಮಾರ್ಟಂ ಮಾಡಿ ಕುಟುಂಬಸ್ಥರಿಗೆ ನೀಡಿ ತನಿಖೆಯನ್ನ ಆರಂಭಿಸಿದ್ದಾರೆ. ಇತ್ತ ಮೂರು ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಡಿದ ನಶೆಯಲ್ಲಿ ಗೆಳೆಯರೊಡನೆ ಜಗಳ ಮಾಡಿಕೊಂಡು ಕೊಲೆ ಮಾಡಿರಬಹುದು, ಕುಟುಂಬಸ್ಥರಲ್ಲಿ ಯಾರಾದ್ರೂ ಕೊಲೆ ಮಾಡಿದ್ದಾರಾ ಅಥವಾ ಆಸ್ತಿ, ಹಣಕ್ಕಾಗಿ ಕೊಲೆ ಮಾಡಿರುವ ಶಂಕೆಯಡಿಯಲ್ಲಿ ತನಿಖೆಯನ್ನ ಕೈಗೆತ್ತಿಕೊಂಡಿದ್ದಾರೆ. ಈ ಕುರಿತು ಜಯಪಾಲ್ ಜೊತೆಗೆ ಇದ್ದವರನ್ನ ಮತ್ತು ಗೆಳೆಯರನ್ನ ಈಗಾಗಲೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಯಾರು ಕೊಲೆ ಮಾಡಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

ಜಯಪಾಲ್ ಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಜಯಪಾಲ್‍ನ ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಮಾಡಿದವರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಆರೋಪಿಗಳನ್ನ ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ನೀಡಬೇಕು ಅಂತ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *