ಮಾಧ್ಯಮಗಳ ಮುಂದೆ ಪೋಸ್ ಕೊಡೋದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ: ಹೆಚ್‍ಡಿಕೆ

Public TV
1 Min Read

ಬೆಂಗಳೂರು: ಮಾಧ್ಯಮಗಳ ಮುಂದೆ ಪೋಸ್ ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ವಿರುದ್ಧ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ ಮಾಡುವ ಮೂಲಕ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಹೆಚ್‍ಡಿಕೆ, ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದರೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ? ನಿಶಕ್ತವಾಗಿರುವ ಲಕ್ಷಣವೋ ಎಂದು ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ ಎಂದಿದ್ದಾರೆ. ಕೊರೊನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದರೆ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ. ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿ ಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೊತೆಗೆ ಕೊರೊನಾ ಸೋಂಕಿತರು ಬೆಡ್‍ಗಳಿಲ್ಲದೆ, ಅಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕೊರೊನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು, ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ. ಪತ್ರಿಕಾಗೋಷ್ಠಿ ಕರೆಯದೆ “ಈ ದಿನ ಪತ್ರಿಕಾಗೋಷ್ಠಿ ಇರುವುದಿಲ್ಲ” ಎಂದು ಸ್ಪಷ್ಟನೆ ನೀಡುವ ಬೌದ್ಧಿಕ ದಾರಿದ್ರ್ಯ ನಿಮ್ಮಂತೆ ನನಗೆ ಬಂದೊದಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನುಡಿಯಲುಬಾರದು ಕೆಟ್ಟನುಡಿಗಳ. ನಡೆಯಲು ಬಾರದು ಕೆಟ್ಟನಡೆಗಳ. ನುಡಿದಡೇನು ನುಡಿಯದಿರ್ದಡೇನು? ಹಿಡಿದವ್ರತ ಬಿಡದಿರಲು ಅದೆ ಮಹಾಜ್ಞಾನದಾಚರಣೆ ಎಂಬೆನು ಅಜಗಣ್ಣ ತಂದೆ ಮುಕ್ತಾಯಕ್ಕ ಎಂದು ಕೊನೆಯದಾಗಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *