ಮಾಜಿ ಸಚಿವ ಪ್ರೊ. ಮಮ್ತಾಜ್ ಅಲಿ ಖಾನ್ ನಿಧನ : ಗಣ್ಯರಿಂದ ಸಂತಾಪ

Public TV
1 Min Read

ಬೆಂಗಳೂರು: 2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರೊ.ಮಮ್ತಾಜ್ ಅಲಿ ಖಾನ್ ಇಂದು ಬೆಳಗ್ಗೆ ಬೆಂಗಳೂರಿನ ತಮ್ಮ ಗಂಗಾನಗರದ ನಿವಾಸದಲ್ಲಿ ನಿಧನರಾಗಿದ್ದಾರೆ.

94 ವರ್ಷ ವಯಸ್ಸಾಗಿದ್ದ ಮಮ್ತಾಜ್ ಅಲಿ ಖಾನೆ, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮಮ್ತಾಜ್ ಅಲಿ ಖಾನ್, 2008 ರಲ್ಲಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿದ್ದರು. ಲೇಖಕರಾಗಿಯೂ ಅವರು ಗಮನಸೆಳೆದಿದ್ದರು. ಹಲವು ಲೇಖನಗಳನ್ನು ಬರೆಯುವ ಮೂಲಕ ಮುಸ್ಲಿಂ ಸಮಾಜದ ಬೇರೆ ಬೇರೆ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದರು. ಆದರೆ ಬಿಜೆಪಿಯಲ್ಲಿದ್ದ ಮಮ್ತಾಜ್ ಅಲಿ ಖಾನ್ ಬಳಿಕ ಡಾ.ಜಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಸಿಎಂ ರಾಜೀನಾಮೆ ಇಲ್ಲ, ಅವರ ಹೇಳಿಕೆಯ ಅರ್ಥ ಸ್ಥಾನ ತ್ಯಜಿಸುತ್ತಾರೆಂದಲ್ಲ: ಅಶ್ವಥ್ ನಾರಾಯಣ್

ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ 1982 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಮಮ್ತಾಜ್ ಅಲಿ ಖಾನ್, 2 ಮಕ್ಕಳನ್ನು ಹಾಗೂ ಪತ್ನಿ ಯನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 1.30 ಕ್ಕೆ ಅವರ ಅಂತ್ಯ ಕ್ರಿಯೆ ಬೆಂಗಳೂರಿನ ಖುದ್ದುಸ್ ಸಾಹೇಬ್ ಖಬ್ರಸ್ಥಾನ್ ನಲ್ಲಿ ನಡೆಯಲಿದೆ.

ಮಾಜಿ ಸಚಿವ ಮಮ್ತಾಜ್ ಅಲಿಖಾನ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ, ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರು, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಆತ್ಮೀಯ ಸ್ನೇಹಿತ ಹಾಗೂ ಸರಳ ಹಾಗೂ ಸಜ್ಜನ ಚಿಂತನಾಶೀಲ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *