ಮಾಜಿ ಮೇಯರ್ ಮನೆಗೆ ಕನ್ನ ಹಾಕಿದ ಖದೀಮ

Public TV
1 Min Read

ಹುಬ್ಬಳ್ಳಿ: ಮಾಜಿ ಮೇಯರ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಮನೆಯಲ್ಲಿದ್ದ ನಗದು ಚಿನ್ನಾಭರಣ ದೋಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಮಾಜಿ ಮೇಯರ್ ಬಿಜೆಪಿ ಮುಖಂಡ ಈರಣ್ಣ ಸವಡಿಯನವರ ವಿಜಯನಗರದ ನಿವಾಸದಲ್ಲಿ ಕಳ್ಳತನವಾಗಿದ್ದು, ಮನೆಯ ಬೆಡ್ ರೂಮ್‍ನ ಕಪಾಟಿನ ಬಾಕ್ಸ್‍ನಲ್ಲಿದ್ದ 1 ಲಕ್ಷ 32 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು 23 ಸಾವಿರ ನಗದು, ಐದು ಸಾವಿರ ಮೌಲ್ಯದ ವಾಚ್‍ಗಳನ್ನು ದೋಚಲಾಗಿದೆ.

ತಂದೆಯ ಆರೈಕೆಗಾಗಿ ಕೇರ್ ಟೇಕರ್ ಆಗಿ ನೇಮಕ ಮಾಡಿಕೊಂಡಿದ್ದ ವ್ಯಕ್ತಿಯೇ ಕಳ್ಳತನ ಮಾಡಿದ್ದಾನೆ ಎಂದು ಈರಣ್ಣ ಸವಡಿ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ತಾಂಡಾದ ಅರುಣ ನಾಯಕ ಎಂಬಾತನೇ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಈರಣ್ಣ ಸವಡಿ ದೂರು ನೀಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *