ಮಹಿಳೆಯ ಮೇಲೆ ವ್ಯಕ್ತಿಯಿಂದ ಆ್ಯಸಿಡ್ ದಾಳಿ- ಆಸ್ಪತ್ರೆಗೆ ದಾಖಲು

Public TV
1 Min Read

ಕೋಲಾರ: ಹಣದ ಲೇವಾದೇವಿ ವಿಚಾರದಲ್ಲಿ ಗಲಾಟೆ ಹಿನ್ನೆಲೆ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಆ್ಯಸಿಡ್ ಎರಚಲು ಯತ್ನಿಸಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಅದೃಷ್ಟವಶಾತ್ ಮಹಿಳೆ ಆ್ಯಸಿಡ್ ದಾಳಿಯಿಂದ ಪಾರಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ.

ಹೌದು. ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮಾರಿಕುಪ್ಪಂನ ಎ.ಜಿ ಬ್ಲಾಕ್‍ನಲ್ಲಿಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಸುಧಾ ಆ್ಯಸಿಡ್ ದಾಳಿಯಿಂದ ತಪ್ಪಿಸಿಕೊಂಡ ಮಹಿಳೆ. ಈಕೆ ಬಡಾವಣೆಯ ಜನರಿಗೆ ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿ ಸಾಲ ನೀಡಿದ್ದು, ಹಣ ಕೇಳಿದ ಹಿನ್ನೆಲೆ ಪರಿಚಯಸ್ಥರೇ ಆ್ಯಸಿಡ್ ದಾಳಿ ಮಾಡಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ.

ಸದ್ಯ ಆ್ಯಸಿಡ್ ದಾಳಿಯಿಂದ ಮಹಿಳೆಗೆ ಯಾವುದೇ ಅನಾಹುತವಾಗಿಲ್ಲ. ಆದರೂ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಸುರಕ್ಷಿತವಾಗಿದ್ದಾಳೆ. ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಅಪರಿಚಿತ ವ್ಯಕ್ತಿ ಆ್ಯಸಿಡ್ ದಾಳಿಯಿಂದ ಕೆಜಿಎಫ್ ನಗರದ ಜನರಲ್ಲಿ ಆತಂಕ ಮೂಡಿದೆ. ಮಾತ್ರವಲ್ಲದೆ ಎರಡು ದಿನಗಳ ಹಿಂದೆಯೂ ಮನೆಯಲ್ಲಿದ್ದ ಮಹಿಳೆ ಮೇಲೆ ಯಾವುದೋ ಕೆಮಿಕಲ್ ದಾಳಿ ನಡೆದಿದ್ದು, ಅಂದು ಕೂಡ ದಾಳಿಯಿಂದ ಬಚಾವ್ ಆಗಿದ್ದಾಳೆ. ಆದರೆ ಇಂದು ಮಧ್ಯಾಹ್ನ ಮನೆ ಬಳಿ ಇದ್ದ ವೇಳೆ ಆ್ಯಸಿಡ್ ಅಥವಾ ಡಿಜಿಟಲ್ ವಾಟರ್ ತಂದು ದಾಳಿ ಮಾಡಿದ್ದಾನೆ ಎಂದು ಮಹಿಳೆಯ ಆರೋಪಿಸಿದ್ದಾಳೆ.

ಈ ಸಂಬಂಧ ಕೆಜಿಎಫ್‍ನ ಮಾರಿಕುಪ್ಪಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *