ಮಹಿಳೆ ಜೊತೆ ಅಕ್ರಮ ಸಂಬಂಧ, ಬ್ಯಾಂಕ್ ಲೋನ್ – 2 ಸಮಸ್ಯೆಗೆ ಪರಿಹಾರ ಅಂತ ಪತ್ನಿಯನ್ನೇ ಕೊಂದ

Public TV
2 Min Read

– ಹಾವು ಕಚ್ಚಿದೆ ಅಂತ ನಾಟಕ, ತನಿಖೆ ವೇಳೆ ಸತ್ಯಾಂಶ ಬಯಲು

ದಾವಣಗೆರೆ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದರೆ ಬ್ಯಾಂಕ್ ಲೋನ್ ಸಂಪೂರ್ಣವಾಗಿ ಕ್ಲಿಯರ್ ಆಗುತ್ತೆ ಎಂದುಕೊಂಡು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.

ರೋಜಾ ಮೃತ ಮಹಿಳೆ. ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ ಎಂದು ಹೇಳಿ ಪತಿ ಅಶೋಕ್ ನಾಟಕವಾಡಿದ್ದನು. ಆದರೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಗಂಡನೇ ಕೊಲೆ ಮಾಡಿರುವ ಸತ್ಯಾಂಶ ಹೊರಗೆ ಬಂದಿದೆ.

ಏನಿದು ಪ್ರಕರಣ?
ಸಿಂಗಟಗೆರೆ ಗ್ರಾಮದ ಅಶೋಕ್ ಕಳೆದ ಆರು ವರ್ಷಗಳ ಹಿಂದೆ ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ರೋಜಾಳನ್ನು ಮದುವೆಯಾಗಿದ್ದನು. ಕಳೆದ ಆರು ವರ್ಷಗಳಿಂದ ಗಂಡ-ಹೆಂಡತಿ ಸುಖವಾಗಿ ಸಂಸಾರ ನಡೆಸುತ್ತಾ ಬಂದಿದ್ದರು. ರೋಜಾ ಹೆಸರಿನಲ್ಲಿ ಆರೋಪಿ ಅಶೋಕ್ ಬ್ಯಾಂಕ್ ಒಂದರಲ್ಲಿ 5 ಲಕ್ಷ ಗೃಹ ಸಾಲ ತೆಗೆದುಕೊಂಡಿದ್ದನು. ಆದರೆ ಹಣವನ್ನು ಖರ್ಚು ಮಾಡಿಕೊಂಡಿದ್ದು, ಹೇಗೆ ಸಾಲ ತೀರಿಸೋದು ಎಂದು ಯೋಚನೆ ಮಾಡುತ್ತಿದ್ದನು.

ಆಗ ಪತ್ನಿ ರೋಜಾಳನ್ನು ಕೊಲೆ ಮಾಡಿದರೆ ಲೋನ್ ಸಂಪೂರ್ಣ ಕ್ಲಿಯರ್ ಆಗುತ್ತೆ. ಮುಂದೆ ಕಟ್ಟುವ ಅವಶ್ಯಕತೆ ಇರೋದಿಲ್ಲ ಎಂದು ಯೋಚನೆ ಮಾಡಿದ್ದಾನೆ. ಅದರಂತೆಯೇ ಪತ್ನಿಯನ್ನು ತನ್ನ ಮೆಕ್ಕೆಜೋಳದ ಹೊಲಕ್ಕೆ ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪತ್ನಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡು ರೋಜಾ ಪ್ರಜ್ಞೆ ತಪ್ಪಿದ್ದಾರೆ ಎಂದು ಎಸ್.ಪಿ.ಹನುಮಂತರಾಯ ತಿಳಿಸಿದ್ದಾರೆ. ಆಗ ಮನೆಗೆ ಫೋನ್ ಮಾಡಿ ಹೊಲದಲ್ಲಿ ಕೆಲಸ ಮಾಡುವಾಗ ರೋಜಾಳಿಗೆ ಹಾವು ಕಚ್ಚಿರಬಹುದು. ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಹೇಳಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರೋಜಾ ಸಾವನ್ನಪ್ಪಿದ್ದಾಳೆ.

ಹೊನ್ನಾಳಿ ಪೊಲೀಸರು ಸಹಜ ಸಾವು ಎಂದು ಕೇಸ್ ದಾಖಲಿಸಿ ನಂತರ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ರೋಜಾಳ ತವರು ಮನೆಯವರು ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ಮಾಡಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನವಿದ್ದ ರೋಜಾಳ ತಂದೆ ಹಾಲೇಶಪ್ಪ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಸಿಪಿಐ ದೇವರಾಜ್ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ.

ಆರೋಪಿ ಅಶೋಕನಿಗೆ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಕೂಡ ಇದ್ದು, ಇದೇ ಕಾರಣಕ್ಕೆ ರೋಜಾಳ ಜೊತೆ ಮನೆಯಲ್ಲಿ ಸಾಕಷ್ಟು ಬಾರಿ ಜಗಳವಾಗಿತ್ತು. ಲೋನ್‍ನ ಹಣವನ್ನು ಕೂಡ ಬಳಕೆ ಮಾಡಿಕೊಂಡು ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೋಜಾಳನ್ನು ಸಾಯಿಸಿದರೆ ಮಾತ್ರ ಎರಡು ಸಮಸ್ಯೆಗಳಿಗೆ ಪರಿಹಾರ ಎಂದು ತಿಳಿದಿದ್ದನು. ಅದರಂತೆಯೇ ಮೆಕ್ಕೆಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಹೊಡೆದಿದ್ದಾನೆ. ಅಲ್ಲದೆ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *