ಮಹಿಳೆಯ ಕೊಲೆಗೈದು ಚಿನ್ನ, ಹಣ ದೋಚಿದ್ದ ಆರೋಪಿ 1 ತಿಂಗಳ ಬಳಿಕ ಅರೆಸ್ಟ್

Public TV
1 Min Read

ಮಡಿಕೇರಿ: ಒಂಟಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ ನಗದು, ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಉಪವಿಭಾಗ ಮತ್ತು ಜಿಲ್ಲಾ ಡಿಸಿಐಬಿ ವಿಭಾಗದ ಪೊಲೀಸ್ ಅಧಿಕಾರಿಗಳು ತಂಡ ಯಶಸ್ವಿಯಾಗಿದೆ.

ಬಂಧಿತ ಆರೋಪಿ ಅನಿಲ್ ಮೆಕಾನಿಕಲ್ ಇಂಜಿನಿಯರ್ ಪದವೀಧರನಾಗಿದ್ದಾನೆ. ಈತನು ಮೂಡಬಿದ್ರೆ ಹಾಗೂ ಮಂಗಳೂರಿನ ಜ್ಯುವೆಲ್ಲರಿ ಶಾಪ್‍ಗಳಲ್ಲಿ ಮಾರಾಟ ಮಾಡಿದ ಸುಮಾರು 72 ಗ್ರಾಂ. ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ 2ಲಕ್ಷದ 80 ಸಾವಿರ) ಹಾಗೂ ಈತನ ಬಳಿಯಿದ್ದ ನಗದು 40 ಸಾವಿರ ರೂ., ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 22 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆನಿಡುಗಣೆ ಗ್ರಾಮದ ಮಹೀಂದ್ರಾ ರೆಸಾರ್ಟ್ ಸಮೀಪ ಮನೆಯಲ್ಲಿ ವಾಸವಿದ್ದ ಸುಮಾರು 70 ವರ್ಷ ಮಹಿಳೆಯನ್ನು ಕೊಲೆಮಾಡಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಡಿಸಿಐಬಿ ಹಾಗೂ ಮಡಿಕೇರಿ ಉಪವಿಭಾಗದ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡವನ್ನು ರಚಿಸಲಾಗಿತ್ತು.

ಪ್ರಕರಣದ ಆರೋಪಿಯ ಬಗ್ಗೆ ಪ್ರಾಥಮಿಕ ತನಿಖಾ ಹಂತದಲ್ಲಿ ಯಾವುದೇ ಸುಳಿವು ಲಭ್ಯವಿರದೆ ಕ್ಲಿಷ್ಟಕರವಾಗಿದ್ದು, ಆರೋಪಿ ಪತ್ತೆಯ ಬಗ್ಗೆ ರಚಿಸಲಾಗಿದ್ದ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದೆ.

ಮಡಿಕೇರಿಯ ಪ್ರಸಿದ್ಧ ಖಾಸಗಿ ರೆಸಾರ್ಟ್‍ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಮೂಲದ ಆರೋಪಿ ಅನಿಲ್ ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿತ್ತು. ವಿಚಾರಣೆ ನಡೆಸಿದಾಗ ಮಹಿಳೆಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣಗಳನ್ನು ಹಾಗೂ ನಗದನ್ನು ದೋಚಿಕೊಂಡು ಹೋಗಿರುವುದು ಧೃಡಪಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *