ಮಹಾಲಯ ಅಮವಾಸ್ಯೆಗೆ ಭಕ್ತರಿಗಿಲ್ಲ ಮಾದಪ್ಪನ ದರ್ಶನ- 3 ದಿನ ಪ್ರವೇಶ ನಿರ್ಬಂಧ

Public TV
1 Min Read

ಚಾಮರಾಜನಗರ: ಅಮವಾಸ್ಯೆ, ಹುಣ್ಣಿಮೆಗಳಂದು ಬಹುತೇಕ ದೇವಸ್ಥಾನಗಳಲ್ಲಿ ಜನದಟ್ಟಣೆ ಉಂಟಾಗುವುದು ಸಾಮಾನ್ಯ. ಅದೇ ರೀತಿ ಮಲೆ ಮಹದೇಶ್ವರ ಬಟ್ಟಕ್ಕೂ ಸಹ ಭಕ್ತ ಸಮೂಹವೇ ಹರಿದು ಬರುತ್ತದೆ. ಇದೀಗ ಮಹಾಲಯ ಅಮವಾಸ್ಯೆ ಹತ್ತಿರವಾಗುತ್ತಿದ್ದು, ಹೆಚ್ಚು ಭಕ್ತರು ಮಹದೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಹೀಗಾಗಿ ಮೂರು ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಮಹಾಲಯ ಅಮವಾಸ್ಯೆ ಹಿನ್ನೆಲೆ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಒಂದೇ ಸ್ಥಳದಲ್ಲಿ ಹೆಚ್ಚು ಜನ ಸೇರುವುದರಿಂದ ಸಮಾಜಿಕ ಅಂತರ ಸೇರಿ ಕೊರೊನಾ ನಿಯಮ ಪಾಲನೆ ಕಷ್ಟ. ಹೀಗಾಗಿ ಸೆಪ್ಟೆಂಬರ್ 16, 17 ಮತ್ತು 18 ರಂದು ಮೂರು ದಿನಗಳ ಕಾಲ ಮಾದಪ್ಪನ ಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಪ್ರವೇಶವನ್ನ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಹಾಲಯ ಅಮವಾಸ್ಯೆಯಂದು ಮಾದಪ್ಪನ ಸನ್ನಧಿಯಲ್ಲಿ ಎಣ್ಣೆ ಮಜ್ಜನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆಯುತ್ತಿತ್ತು. ಅಮವಾಸ್ಯೆ ದಿನ ಭಕ್ತರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದು ಮೂರು ದಿನಗಳ ಕಾಲ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಹುಲಿವಾಹನ, ಚಿನ್ನದ ತೇರು ಮತ್ತು ಪರ ಹಾಗೂ ಅನ್ನಸಂತರ್ಪಣೆ ಮಾಡಿ ಹೋಗುತ್ತಿದ್ದರು.

ಕೊರೊನಾದಿಂದಾಗಿ ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೂ ವಿಶೇಷ ದಿನಗಳಲ್ಲಿ ಅಂದರೆ ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ಭಕ್ತರಿಗೆ ಮಾದಪ್ಪನ ಬೆಟ್ಟಕ್ಕೆ ಪ್ರವೇಶ ನಿರ್ಭಂದಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ಭಕ್ತರಿಗೆ ನಿರಾಸೆಯಾಗುತ್ತಿದೆ. ಬೆಟ್ಟದಲ್ಲಿ ಇದೇ ದಿನಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ವ್ಯಾಪಾರಸ್ಥರಿಗೂ ಸಂಕಷ್ಟ ಎದುರಾಗಿದೆ.

ಕೊರೊನಾ ಕಾರಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸತತ 5 ತಿಂಗಳುಗಳ ಕಾಲ ಭಕ್ತರಿಗೆ ನಿಷೇಧ ಹೇರಲಾಗಿತ್ತು. ಜೂನ್ 8ರಂದು ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಮಾದಪ್ಪನ ದರ್ಶನ ಮಾಡುವ ವ್ಯವಸ್ಥೆಯನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *