ಮಸ್ಕಿ ಉಪಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ತೀರ್ಮಾನ!

Public TV
1 Min Read

ರಾಯಚೂರು: ಇಲ್ಲಿನ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆಯೇ ಘೋಷಣೆಯಾಗಿಲ್ಲ. ಅದಾಗಲೇ ಈ ಗ್ರಾಮದ ಜನ ಶಾಲೆಗಾಗಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಕಳೆದ ಬಾರಿ ಬಹಿಷ್ಕಾರಕ್ಕೆ ಮುಂದಾದಾಗ ಭರವಸೆ ಕೊಟ್ಟು ಸುಮ್ಮನಾಗಿಸಿದ್ರು. ಹೀಗಾಗಿ ರೊಚ್ಚಿಗೆದ್ದಿರೋ ಜನ ಮತ ಕೇಳಲು ಬಂದ್ರೆ ಗ್ರಹಚಾರ ಬಿಡಿಸ್ತೀವಿ ಅಂತ ಎಚ್ಚರಿಸಿದ್ದಾರೆ.

ಹೌದು. ರಾಯಚೂರಿನ ಮಸ್ಕಿ ತಾ. ಬುದ್ದಿನ್ನಿಯಲ್ಲಿ ಸುಂದರ ಪರಿಸರದಲ್ಲಿ ಭವ್ಯ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಆದರೆ ಈ ಕಟ್ಟಡ ಯಾವ ಶಾಲೆಗೆ ಎಂಬುದೇ ಗೊತ್ತಿಲ್ಲ. ಕಾರಣ ಈ ಗ್ರಾಮಕ್ಕೆ ಇದುವರೆಗೂ ಶಾಲೆಯೇ ಮಂಜೂರಾಗಿಲ್ಲ. ಕಟ್ಟಡ ಮಾತ್ರ ಪೂರ್ಣಗೊಂಡಿದೆ. ಗ್ರಾಮದ ಮಕ್ಕಳು ಗ್ರಾಮದಲ್ಲೇ ಶಿಕ್ಷಣ ಮುಂದುವರೆಸಲು ಪ್ರೌಢಶಾಲೆಗೆ ಅನುಮತಿ ಸಿಗಬೇಕಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಳ್ತಿಲ್ಲ. ಈಗ ಸಿಟ್ಟಿಗೆದ್ದಿರುವ ಮುಂಬರುವ ಮಸ್ಕಿ ಉಪಚುನಾವಣೆ ಮತದಾನ ಬಹಿಷ್ಕರಿಸುವ ತೀರ್ಮಾನಿಸಿದ್ದಾರೆ.

ಬುದ್ದಿನ್ನಿ, ಹಾಲಾಪುರ, ಸಾನಾಬಾಳ, ಬೆಂಚಮರಡಿ ಸೇರಿ 8 ಗ್ರಾಮಗಳಿಂದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೌಢಶಾಲಾ ಶಿಕ್ಷಣಕ್ಕೆ ಮಸ್ಕಿ ಇಲ್ಲವೇ ಪಾಮನಕಲ್ಲೂರಿಗೆ ಹೋಗಬೇಕು. ಬಸ್ ಸರಿಯಾದ ಸಮಯಕ್ಕೆ ಬಾರದ ಹಿನ್ನಲೆ ವಿದ್ಯಾರ್ಥಿಗಳು ಆರೇಳು ಕಿ.ಮೀ ನಡೆದುಕೊಂಡೇ ಶಾಲೆಗೆ ಹೋಗಬೇಕು. ಹೆಣ್ಣು ಮಕ್ಕಳನ್ನು ಕಳುಹಿಸಲು ಹಿಂಜರಿಯುವ ಪಾಲಕರು ಶಾಲೆ ಬಿಡಿಸಿ ಮದುವೆ ಮಾಡುತ್ತಿದ್ದಾರೆ.

ಕೆಲವು ಮಕ್ಕಳು ಪಾಲಕರೊಂದಿಗೆ ಗುಳೇ, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. 2013 ರಿಂದ ಇಲ್ಲಿ ಹೈಸ್ಕೂಲ್ ನೀಡಿ ಎಂದು ಗ್ರಾಮಸ್ಥರು ಹೋರಾಟ ಮಾಡಿದ್ರು. ಇನ್ನಾದ್ರೂ ಶಿಕ್ಷಣ ಇಲಾಖೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕಿದೆ. ಇಲ್ಲದಿದ್ರೆ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸುವುದಂತೂ ಪಕ್ಕಾ.

Share This Article
Leave a Comment

Leave a Reply

Your email address will not be published. Required fields are marked *