ಮಳೆ ಸುರಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಹಿಳಾ ಅರಣ್ಯಾಧಿಕಾರಿ

Public TV
1 Min Read

ಭುವನೇಶ್ವರ: ಅರಣ್ಯ ಪ್ರದೇಶದಲ್ಲಿ ಜೋರಾಗಿ ಮಳೆಸುರಿಯುತ್ತಿದ್ದಂತೆ ಅಲ್ಲಿನ ಮಹಿಳಾ ಅರಣ್ಯಾಧಿಕಾರಿಯೊಬ್ಬರು ಮಳೆಯಲ್ಲಿ ನೆನೆದುಕೊಂಡು ಕುಣಿದು ಕುಪ್ಪಳಿಸಿರುವ ವೀಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಒಡಿಶಾದ ಸಿಮಿಲಿಪಾಲ್‍ನ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಕೆಲದಿನಗಳಿಂದ ಉಂಟಾದ ಕಾಡ್ಗಿಚ್ಚಿನಿಂದಾಗಿ ಹಲವು ಪ್ರಾಣಿ ಪಕ್ಷಿಗಳು ಮತ್ತು ಸಸ್ಯ ಪ್ರಬೇಧಗಳು ನಾಶವಾಗಿದ್ದವು. ಇದರಿಂದ ನೊಂದಿದ್ದ ಅರಣ್ಯಧಿಕಾರಿ ಸ್ನೇಹ ಧಾಲ್, ಕಾಡ್ಗಿಚ್ಚು ಪ್ರದೇಶದಲ್ಲಿ ಮಳೆಸುರಿಯುತ್ತಿದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಸ್ನೇಹ ಧಾಲ್ ಅರಣ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಮಯೂರ್ಭಂಜ್ ಜಿಲ್ಲೆಯ ಸಿಮಿಲಿಪಾಲ್‍ನಲ್ಲಿ ಸಂಭವಿಸಿದ ಕಾಡ್ಗಿಚ್ಚನ್ನು ನೋಡಿ ನೊಂದಿದ್ದರು. ಈ ಘಟನೆ ನಡೆದು ಎರಡು ವಾರಗಳಲ್ಲಿ ಸಿಮಿಲಿಪಾಲ್ ಅರಣ್ಯದಲ್ಲಿ ಮಳೆ ಸುರಿದಿದೆ. ಈ ಸಂದರ್ಭ ಅರಣ್ಯದಲ್ಲಿದ್ದ ಸ್ನೇಹ ಧಾಲ್ ತನ್ನ ಕೈಯನ್ನು ಮುಂದೆ ಚಾಚಿಕೊಂಡು ಮಳೆಗೆ ಮೈಯೊಡ್ಡಿ ನೃತ್ಯ ಮಾಡಿ ಇನ್ನು ಜೋರಾಗಿ ತುಂಬಾ ಮಳೆ ಸುರಿಯಲಿ ಎಂದು ಮಳೆರಾಯನನ್ನು ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಸ್ನೇಹ ಧಾಲ್ ಅರಣ್ಯ ಪ್ರದೇಶದಲ್ಲಿ ಮಳೆಗಾಗಿ ಹಂಬಲಿಸಿದ ವೀಡಿಯೋವನ್ನು ಹಿರಿಯ ಅರಣ್ಯ ಅಧಿಕಾರಿ ರಮೇಶ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದೇವರ ಕೃಪೆಯಿಂದ ಮಳೆ ಸುರಿದಿದೆ. ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆಗಾಗಿ ಹೋರಾಡಿದ ಸ್ನೇಹ ಧಾಲ್ ಮಳೆ ಬಂದ ಖುಷಿಗೆ ನೃತ್ಯ ಮಾಡಿದ್ದಾರೆ. ಸಿಮಿಲಿಪಾಲ್ ಅರಣ್ಯದಲ್ಲಿ ಮೋಡಿಸ್ ಉಪಗ್ರಹದ ಡೇಟಾ ಪ್ರಕಾರ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ಒಡಿಶಾ ಸರ್ಕಾರ ತಿಳಿಸರುವ ಮಾಹಿತಿ ಪ್ರಕಾರ ಕಾಡ್ಗಿಚ್ಚಿನಿಂದ ಶೇ.95 ಭಾಗ ಕಾಡು ನಾಶವಾಗಿದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *