ಮಲ್ಲೇಶ್ವರ ಕೋವಿಡ್ ಪರಿಸ್ಥಿತಿ ಅವಲೋಕನ ಮಾಡಿದ ಡಿಸಿಎಂ

Public TV
2 Min Read

– ಜನರ ಅಗತ್ಯಗಳ ಪೂರೈಕೆಗೆ ಸರ್ವಕ್ರಮ

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಶತಾಗತಾಯ ಪ್ರಯತ್ನ ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಇಂದು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಪರಿಸ್ಥಿತಿಯನ್ನು ಪಕ್ಷದ ವೇದಿಕೆಯಲ್ಲಿ ಅವಲೋಕನ ಮಾಡಿದರು.

ಕ್ಷೇತ್ರದ ಬಿಜೆಪಿಯ ಎಲ್ಲಾ ವಾರ್ಡ್ ಪ್ರಮುಖರು, ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರೊಂದಿಗೆ ವರ್ಚುವಲ್ ಸಭೆ ನಡೆಸಿದ ಅಶ್ವತ್ಥನಾರಾಯಣ ಅವರು, ಕೋವಿಡ್ ನಿರ್ವಹಣಾ ಕಾರ್ಯಗಳು ಮತ್ತು ತಕ್ಷಣಕ್ಕೆ ಆಗಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಎಲ್ಲರಿಗೂ ಸಲಹೆ ಸೂಚನೆಗಳನ್ನು ನೀಡಿದರು.

ಪಕ್ಷದ ಕಾರ್ಯಕರ್ತರು ಕೋವಿಡ್ ನಿರ್ವಹಣೆಯ ಕುರಿತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಬದ್ಧತೆಯಿಂದ ಜನರಿಗೆ ನೆರವಾಗಬೇಕು. ಎಲ್ಲಾ ವಾರ್ಡ್‍ಗಳಲ್ಲೂ ಸೋಂಕು ನಿವಾರಣಾ ಔಷಧವನ್ನು (disinfectant spray) ಸಿಂಪಡಣೆ ಮಾಡಿಸಬೇಕು. ಆ ಕೆಲಸ ಇನ್ನೇನು ಪ್ರಾರಂಭವಾಗುತ್ತಿದೆ. ಕ್ಷೇತ್ರದ ಎಲ್ಲ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಔಷಧಿ, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಆಕ್ಸಿಜನ್ ಸಿಲಿಂಡರ್ ಗಳನ್ನು ರೀಫಿಲ್ ಮಾಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಸಭೆಯಲ್ಲಿ ಹೇಳಿದರು.

ಆಮ್ಲಜನಕ ಅಗತ್ಯದ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ಗುಟ್ಟಹಳ್ಳಿಯಲ್ಲಿರುವ ಕಾರ್ಪೊರೇಷನ್ ಮ್ಯಾಟರ್ನಿಟಿ ಸೆಂಟರ್ ನಲ್ಲಿ ಆಕ್ಸಿಜನ್ ಪೂರೈಕೆ ಮಾಡುವ ಕೆಲಸ ಮಾಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನೇಷನ್ ಮಾಡಿಸುವಂತೆ ಡಿಸಿಎಂ ಪಕ್ಷದ ಮುಖಂಡರಿಗೆ ಸೂಚಿಸಿದರು.

ಕೋವಿಡ್ ಲಕ್ಷಣ ಇರುವ ವ್ಯಕ್ತಿಗಳಿಗೆ ತಕ್ಷಣ ಪರೀಕ್ಷೆ ಮಾಡಿಸಬೇಕು. ಸೋಂಕು ಖಚಿತವಾದರೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಜನರ ಮನವೊಲಿಸಬೇಕು. ಆಮ್ಲಜನಕದ ಅಗತ್ಯ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ತಕ್ಷಣ ಚಿಕಿತ್ಸೆ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರಕ್ಕೆ ಹೆಲ್ಪ್ ಲೈನ್:
ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಿರಲು ಮಲ್ಲೇಶ್ವರಂ ವಾರ್ಡ್ ನಲ್ಲಿ ಹೆಲ್ಪ್ ಲೈನ್ ಅನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಯಾವುದೇ ಮಾಹಿತಿ ಬೇಕಾದರೂ ಸಹಾಯವಾಣಿ ಮೂಲಕ ಪಡೆಯಬಹುದು. ಇನ್ನು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಕೊಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ತಪ್ಪದೇ ಹಾಕಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು ಎಂದು ಡಿಸಿಎಂ ಸೂಚನೆ ಕೊಟ್ಟರು.

ಪಡಿತರ ಇಲ್ಲವೇ ಆಹಾರ ಪದಾರ್ಥಗಳನ್ನು ಪಡೆಯಲು ಅಶಕ್ತರಾಗಿರುವ ಬಡವರಿಗೆ ನನ್ನ ಕಚೇರಿಯ ಕಡೆಯಿಂದ ಅಗತ್ಯತೆಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಸೋಂಕಿತರ ಕುಟುಂಬಕ್ಕೆ ಅಗತ್ಯ ಇರುವ ಆಹಾರ ಪದಾರ್ಥ ತಲುಪಿಸಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದು ಎಂದು ಡಿಸಿಎಂ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *