ಮರೆಯಾದ ಮರೆಯಲಾಗದ ಪತ್ರಕರ್ತ – ರವಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

Public TV
1 Min Read

ಬೆಂಗಳೂರು: ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಹಾಗೆಯೇ ಸಚಿವ ಸುರೇಶ್ ಕುಮಾರ್ ಕೂಡ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ಖ್ಯಾತ ಬರಹಗಾರರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ರವಿ ಬೆಳಗೆರೆ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೇಳಿಬಂದ ದೊಡ್ಡ ಹೆಸರು. ಅತ್ಯಂತ ಮೇಧಾವಿ ಬರಹಗಾರ. ಬರೆಯಲಿಕ್ಕೆ ಕೂತರೆ ಅವರದ್ದು ದೈತ್ಯ ಶಕ್ತಿ. ಬಹಳ ನಿರ್ಭಿಡೆ ವ್ಯಕ್ತಿತ್ವ.

“ಹಾಯ್ ಬೆಂಗಳೂರು” ಎಂಬ ಹೆಸರಿನ ಪತ್ರಿಕೆಯ ಮೂಲಕ ಬಹಳ ಒಳ್ಳೆಯ ಹೆಸರು ಮತ್ತು ಸ್ವಲ್ಪ ನಕಾರಾತ್ಮಕ ಹೆಸರನ್ನೂ ಸಹ ಗಳಿಸಿದ ಓರ್ವ ಪತ್ರಕರ್ತ. ಒಂದು ಶಾಲೆಯನ್ನು ಹೀಗೂ ಕಟ್ಟಬಹುದು, ಹೀಗೂ ನಡೆಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಅವರ “ಪ್ರಾರ್ಥನಾ ಶಾಲೆ”.

ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಯ್ ಬೆಂಗಳೂರು ಮೊದಲ ಸಂಚಿಕೆ ಪ್ರಕಟವಾಗುವ ಮುನ್ನ ರವಿ ನನ್ನ ಮನೆಗೆ ಬಂದು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ನಡೆಯುವ ಲಾಬಿಗಳ ಬಗ್ಗೆ ಸಂಪೂರ್ಣ ವಿಷಯ ತಿಳಿದುಕೊಂಡು ಹೋಗಿ ಅದ್ಭುತವಾದ ಒಂದು ಮುಖ ಲೇಖನ ಬರೆದಿದ್ದರು.

ಇತ್ತೀಚಿನ ಕೆಲವು ವರ್ಷಗಳಿಂದ ಅವರ ಆರೋಗ್ಯ ಕುಸಿಯುತ್ತಾ ಬಂದಿತ್ತು. ರವಿ ಬೆಳಗೆರೆ ನಾವ್ಯಾರೂ ಮರೆಯಲಾಗದ ಪತ್ರಕರ್ತ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *