ಮರಳು ಮಾರಾಟ ಮಾಡುವ ನೆಪದಲ್ಲಿ ಡೀಸೆಲ್ ಕದಿಯುತ್ತಿದ್ದ ಖದೀಮರು ಅರೆಸ್ಟ್

Public TV
1 Min Read

ಮುಂಬೈ: ಡೀಸೆಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಮೇಲೆ ದಾಳಿ ಮಾಡಿ 14 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಕನ್ನಡ ತಾಲೂಕಿನಲ್ಲಿ ನಡೆದಿದೆ.

ಅಂತಾರಾಜ್ಯ ಡಿಸೇಲ್ ಗ್ಯಾಂಗ್‍ನ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಮಂದಿಯನ್ನು ಬಂಧಿಸಲಾಗಿದೆ. ದಾಳಿ ವೇಳೆ 4 ಟ್ರಕ್, ಡೀಸೆಲ್ ತುಂಬಿದ್ದ 40 ಕಂಟೇನರ್ ಹಾಗೂ 98 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಷದಾ ಪಾಟೀಲ್ ಹೇಳಿದ್ದಾರೆ.

ಫೆ16ರಂದು ಚಿತೆಗಾಂವ್ ಪೆಟ್ರೋಲ್ ಬಂಕ್‍ನಿಂದ ಕೆಲವು ದಿನಗಳ ಹಿಂದೆ 3,480 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ಚಿಕಲಠಾಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಯಲ್ಲಿ ನಾವು ತನಿಖೆ ನಡೆಸುತ್ತಿದ್ದೆವು. ಕೆಲವು ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ಕಳ್ಳರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಡೀಸೆಲ್ ಕದಿಯುವ ಕಳ್ಳರ ಗ್ಯಾಂಗ್‍ನ ಸದಸ್ಯರು ಮರಳು ಮಾರಾಟ ಮಾಡುವ ಸೊಗಿನಲ್ಲಿ ಬಂದು ಕದಿಯುತ್ತಿದ್ದರು. ಗುಜರಾತ್‍ನ ತಾಪಿ ಜಿಲ್ಲೆಯಲ್ಲಿ ಟ್ರಕ್‍ಗಳ ಮೂಲಕ ಮರಳನ್ನು ತುಂಬಿಸಿಕೊಂಡು ಉಸ್ಮಾನಾಬಾದ್‍ನಲ್ಲಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೆಟ್ರೋಲ್ ಬಂಕ್‍ಗಳ ಬಳಿ ತಂಗುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂಕ್‍ನಲ್ಲಿನ ಹ್ಯಾಂಡ್ ಪಂಪ್ ಮೂಲಕ ಡೀಸೆಲ್ ಕದಿಯುತ್ತಿದ್ದರು. ತಾವು ಉಪಯೋಗಿಸಿ, ಉಳಿದ ಡೀಸೆಲ್ ಕಡಿಮೆ ಬೆಲೆಗೆ ಇತರ ಟ್ರಕ್ ಚಾಲಕರಿಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ವಿಚಾರಣೆ ವೇಳೆ 36 ಕಡೆಗಳಲ್ಲಿ ಈ ರೀತಿಯ ಡೀಸೆಲ್ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಗ್ಯಾಂಗ್ ಐದು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿರುವುದು ತಿಳಿದು ಬಂದಿದೆ. ಇದೇ ರೀತಿಯ ಪ್ರಕರಣಗಳು ಗುಜರಾತ್, ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವೆಡೆ ನಡೆದಿದ್ದು ದೂರುಗಳು ದಾಖಲಾಗಿವೆ.

Share This Article
Leave a Comment

Leave a Reply

Your email address will not be published. Required fields are marked *