ಮಮತಾ ಬ್ಯಾನರ್ಜಿ ಮೇಲೆ ಯಾವುದೇ ದಾಳಿ ನಡೆದಿಲ್ಲ – ಪ್ರತ್ಯಕ್ಷದರ್ಶಿ ಸ್ಪಷ್ಟನೆ

Public TV
1 Min Read

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿಲ್ಲ. ಅವರ ಕಾರು ಕಂಬಕ್ಕೆ ಗುದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ನಂದಿಗ್ರಾಮದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ದಾಳಿ ನಡೆದಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಲಾಗಿರುವ ಬೆನ್ನಲ್ಲೇ, ನಂದಿಗ್ರಾಮದ ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿಲ್ಲ ಅವರ ಕಾರು ಕಂಬಕ್ಕೆ ಗುದ್ದಿರುವ ಕಾರಣ ಕಾಲಿಗೆ ಗಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

ನಂದಿಗ್ರಾಮದ ಸ್ಥಳೀಯರು ತಿಳಿಸುವ ಪ್ರಕಾರ ಮಮತಾ ಬ್ಯಾನರ್ಜಿಯವರು ದೇವಸ್ಥಾನಕ್ಕೆ ಭೇಟಿ ನೀಡಲು ಬಂದಾಗ ಸಂಚರಿಸುತ್ತಿದ್ದ ಕಾರು ಕಂಬಕ್ಕೆ ಡಿಕ್ಕಿ ಹೊಡೆದು ಗಾಯವಾಗಿದೆ. ಇದನ್ನು ಹೊರತು ಪಡಿಸಿ ಅವರು ತಿಳಿಸಿದಂತೆ ಯಾವುದೇ ದಾಳಿಗಳು ನಡೆದಿಲ್ಲ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ದಾಳಿ ನಡೆದಿದೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಎಸ್‍ಎಸ್‍ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಮಮತಾ ಬ್ಯಾನರ್ಜಿ ಎದೆನೋವು ಮತ್ತು ಉಸಿರಾಟದ ತೊಂದರೆಯಾಗುತ್ತಿದೆ ಎಂದು ವೈದ್ಯರಿಗೆ ತಿಳಿಸಿರುವುದರಿಂದ ಆರೋಗ್ಯದ ಕುರಿತು ಹೆಚ್ಚಿನ ನಿಗಾವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿಯವರು ಎಡಪಾದದ ಎಲುಬಿನಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿದ್ದು, ಪ್ಲಾಸ್ಟರ್ ಹಾಕಲಾಗಿದೆ. ಅದೇ ರೀತಿ ಬಲ ಭುಜ, ಕುತ್ತಿಗೆಯ ಭಾಗ, ಮತ್ತು ಎದೆನೋವು ಕಾಣಿಸಿಕೊಂಡಿರುವ ಕಾರಣ ಮುಂದಿನ 48 ಗಂಟೆಗಳ ಕಾಲ ತೀವ್ರ ನಿಗಾ ವಹಿಸಲಾಗುವುದು ಎಂದು ಐಪಿಜಿಎಂಇಆರ್ ಮತ್ತು ಎಸ್‍ಎಸ್‍ಕೆಎಂನ ವೈದ್ಯರಾದ ಡಾ.ಎಂ.ಬಂದೋಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಮುಂದಿನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಆಸ್ಪತ್ರೆಯ ವಿಶೇಷ ವಾರ್ಡ್‍ಗೆ ಎಂಆರ್‍ಐ ಪರೀಕ್ಷೆಯ ನಂತರ ಶಿಫ್ಟ್ ಮಾಡಲಾಗುವುದು, ಹಾಗೂ ಅವರ ಆರೋಗ್ಯದ ಕುರಿತು 48 ಗಂಟೆ ನಿಗಾವಹಿಸಿ ಇನ್ನುಳಿದ ಕೆಲವು ಆರೋಗ್ಯ ತಪಾಸಣೆಯನ್ನು ನಡೆಸಿ ಮುಂದಿನ ಚಿಕಿತ್ಸೆಯ ಕುರಿತು ನಿರ್ಧಾರ ಮಾಡುವುದಾಗಿ ವೈದ್ಯರ ತಂಡದ ಸದಸ್ಯರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *