ಮಮತಾ ಬ್ಯಾನರ್ಜಿ ಮೇಲೆ ದಾಳಿ – ಆಸ್ಪತ್ರೆಗೆ ದಾಖಲು

Public TV
1 Min Read

ಕೋಲ್ಕತ್ತಾ: ನಂದಿಗ್ರಾಮದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದ್ದು, ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ ಕಾಲು ನೋವಾಗಿದ್ದು, ಪ್ಲಾಸ್ಟರ್ ಹಾಕಲಾಗಿದೆ.

ಮಮತಾ ಬ್ಯಾನರ್ಜಿ ಅವರಿಗೆ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಎಸ್‍ಎಸ್‍ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಮಮತಾ ಬ್ಯಾನರ್ಜಿ ಎದೆನೋವು ಮತ್ತು ಉಸಿರಾಟದ ತೊಂದರೆಯಾಗುತ್ತಿದೆ ಎಂದು ವೈದ್ಯರಿಗೆ ತಿಳಿಸಿರುವುದರಿಂದ ಆರೋಗ್ಯದ ಕುರಿತು ಹೆಚ್ಚಿನ ನಿಗಾವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿಯವರು ಎಡಪಾದದ ಎಲುಬಿನಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿದ್ದು, ಪ್ಲಾಸ್ಟರ್ ಹಾಕಲಾಗಿದೆ. ಅದೇ ರೀತಿ ಬಲ ಭುಜ, ಕುತ್ತಿಗೆಯ ಭಾಗ, ಮತ್ತು ಎದೆನೋವು ಕಾಣಿಸಿಕೊಂಡಿರುವ ಕಾರಣ ಮುಂದಿನ 48 ಗಂಟೆಗಳ ಕಾಲ ತೀವ್ರ ನಿಗಾ ವಹಿಸಲಾಗುವುದು ಎಂದು ಐಪಿಜಿಎಂಇಆರ್ ಮತ್ತು ಎಸ್‍ಎಸ್‍ಕೆಎಂನ ವೈದ್ಯರಾದ ಡಾ.ಎಂ.ಬಂದೋಪಾಧ್ಯಾಯ ಮಾಹಿತಿ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಮುಂದಿನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಆಸ್ಪತ್ರೆಯ ವಿಶೇಷ ವಾರ್ಡ್‍ಗೆ ಎಂಆರ್‍ಐ ಪರೀಕ್ಷೆಯ ನಂತರ ಶಿಪ್ಟ್ ಮಾಡಲಾಗುವುದು, ಹಾಗೂ ಅವರ ಆರೋಗ್ಯದ ಕುರಿತು 48 ಗಂಟೆ ನಿಗಾವಹಿಸಿ ಇನ್ನುಳಿದ ಕೆಲವು ಆರೋಗ್ಯ ತಪಾಸಣೆಯನ್ನು ನಡೆಸಿ ಮುಂದಿನ ಚಿಕಿತ್ಸೆಯ ಕುರಿತು ನಿರ್ಧಾರ ಮಾಡುವುದಾಗಿ ವೈದ್ಯರ ತಂಡದ ಸದಸ್ಯರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ್ದಾರೆ.

ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ಪ್ರಾರ್ಥಣೆಗಾಗಿ ಬಂದಾಗ ಕಾರ್‍ ನ ಡೋರ್ ಓಪನ್ ಮಾಡಿದ ತಕ್ಷಣ ಕೆಲವರು ಕಾರ್ ಬಳಿ ಮುಗಿಬಿದ್ದು ಕಾರ್ ಡೋರ್‍ ನ್ನು ತಳ್ಳಿದ ವೇಳೆ ಕಾಲಿಗೆ ಗಾಯವಾಗಿದೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಆಸ್ಪತ್ರೆ ಸೇರುತ್ತಿದ್ದಂತೆ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರರಾದ ಪಿ.ನಿರಾಜ್ನಾಯನ್, ಮಿಡ್ನಾಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯಿಂದ ಘಟನೆಯ ವಿವರ ಕೇಳಿದ್ದಾರೆ. ಘಟನೆಗೆ ಭದ್ರತಾ ವೈಫಲ್ಯ ಕಾರಣ ಎಂಬ ದೂರು ಕೂಡ ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *