ಮಮತಾ ದೀದಿ ನಿಮ್ಮ ಕೈ ರಕ್ತಸಿಕ್ತವಾಗಿದೆ, ಯಾವ ಪುಣ್ಯದಿಂದಲೂ ತೊಳೆದುಕೊಳ್ಳಲು ಆಗಲ್ಲ: ಸಿ.ಟಿ ರವಿ

Public TV
1 Min Read

– ರಕ್ತಸಿಕ್ತ ಕೈಗಳಿಂದ ಅಧಿಕಾರ ನಡೆಸಿದರೆ ಪುಣ್ಯಕ್ಕಿಂತ ಪಾಪವೇ ಹೆಚ್ಚು

ಚಿಕ್ಕಮಗಳೂರು: ಮಮತಾ ದೀದಿ, ರಕ್ತಸಿಕ್ತ ಕೈಗಳನ್ನು ಯಾವ ಪುಣ್ಯ ಕಾರ್ಯದಿಂದಲೂ ತೊಳೆದುಕೊಳ್ಳಲು ಆಗುವುದಿಲ್ಲ, ಇಂಥ ರಕ್ತಸಿಕ್ತ ಕೈಗಳಿಂದ ಅಧಿಕಾರ ನಡೆಸಿದರೆ ಪಾಪವೇ ಹೆಚ್ಚಾಗುತ್ತೆ, ಪುಣ್ಯ ಬರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿನ ದೌರ್ಜನ್ಯ ಖಂಡಿಸಿ ಸಾಂಕೇತಿಕ ಪ್ರತಿಭಟನೆಯ ಬಳಿಕ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲೂ ದೌರ್ಜನ್ಯದ ಮೂಲಕ ಚುನಾವಣೆ ನಡೆಸಲು ಮುಂದಾದಿರಿ, ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ದೌರ್ಜನ್ಯದ ಮೂಲಕ ಬಿಜೆಪಿ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೀರಾ ಇದನ್ನ ನಾವು ಖಂಡಿಸುತ್ತೇವೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 72 ಗಂಟೆಗಳಲ್ಲಿ ಬಿಜೆಪಿ ಕಚೇರಿಯನ್ನ ಸುಟ್ಟು, ಮನೆಗಳಿಗೆ ಬೆಂಕಿ ಹಾಕಿ, ಕಾರ್ಯಕರ್ತರ ಅಂಗಡಿ ಲೂಟಿ ಮಾಡಿ 12ಕ್ಕೂ ಹೆಚ್ಚು ಕಾರ್ಯಕರ್ತರನ್ನ ಹತ್ಯೆ ಮಾಡಿದ್ದಾರೆ. 281ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದೆ. ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನ ಖಂಡಿಸಿ ಬಿಜೆಪಿ ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ನೈತಿಕ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸಿ, ಅಭಿವೃದ್ಧಿಗೆ ಸಹಕಾರ ಕೊಡುತ್ತೇವೆ ಎಂದಿದ್ದೇವೆ. ಬಿಜೆಪಿ ಯಾವತ್ತೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧವಾಗಿ ವರ್ತಿಸಿಲ್ಲ. ಆದರೆ ಹತ್ಯೆಯ ಮೂಲಕ ಒಂದು ರಾಜಕೀಯ ಪಕ್ಷದ ಧ್ವನಿಯನ್ನು ಹತ್ತಿಕ್ಕಬಹುದು ಎಂಬ ದುಷ್ಟ ಆಲೋಚನೆ ಸರಿಯಲ್ಲ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳ್ ಅವರನ್ನ ಹತ್ಯೆ ಮಾಡಿದರು. ಬಿಜೆಪಿ ಬೆಳವಣಿಗೆ ತಡೆಯಲು ಆಗಲಿಲ್ಲ, ಹತ್ಯೆ ಮೂಲಕ ಪಕ್ಷದ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ. ಪಕ್ಷ ಮತ್ತೆ ಹತ್ತು ಪಟ್ಟು ಸಾಮಥ್ರ್ಯದಿಂದ ಮೇಲೆದ್ದು ನಿಲ್ಲುತ್ತೆ, ಹತ್ಯಾ ರಾಜಕಾರಣ ಕೊನೆಯಾಗಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *