ಮನ್ಸುಕ್ ಪ್ರಕರಣ ಕೊಲೆಯೋ, ಆತ್ಮಹತ್ಯೆಯೋ? ಇದು ಮಹಾರಾಷ್ಟ್ರ ವಿನಾಶಕ ಅಘಾಡಿ- ಸಿ.ಟಿ.ರವಿ ವಾಗ್ದಾಳಿ

Public TV
3 Min Read

ನವದೆಹಲಿ: ಮಹಾ ವಿಕಾಸ್ ಅಘಾಡಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದು, ಮಹಾರಾಷ್ಟ್ರ ವಿನಾಶಕ ಅಘಾಡಿ ಎಂದು ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಸಿ.ಟಿ.ರವಿ, ಮುಕೇಶ್ ಅಂಬಾನಿ ಮನೆ ಬಳಿ ಜಿಲೆಟಿನ್ ಕಡ್ಡಿಗಳಿದ್ದ ಕಾರ್ ಮಾಲೀಕ ಮನ್ಸುಕ್ ಹಿರೆನ್ ಅವರದ್ದು ಕೊಲೆಯೋ, ಆತ್ಮಹತ್ಯೆಯೋ? ಮಹಾರಾಷ್ಟ್ರ ವಿನಾಶಕ ಅಘಾಡಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಎನ್‍ಐಎ ತನಿಖೆಗೆ ಆದೇಶಿಸುತ್ತಾರೆಯೇ, ಸತ್ಯ ಹೊರಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಉದ್ಯಮಿ ಮುಕೇಶ್ ಅಂಬಾನಿ ಮನೆಯ ಬಳಿ ಜಿಲೆಟಿನ್ ಕಡ್ಡಿಗಳಿದ್ದ ಸ್ಕಾರ್ಪಿಯೋ ಕಾರ್ ಮಾಲೀಕ ಮನ್ಸುಕ್ ಹಿರೆನ್ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆಯೋ, ಆತ್ಮಹತ್ಯೆಯೋ ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಎನ್‍ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತಿದೆ.

ಇದು ಕೊಲೆಯೋ, ಆತ್ಮಹತ್ಯೆಯೋ? ಮಹಾರಾಷ್ಟ್ರ ವಿನಾಶಕ ಅಘಾಡಿ ಸಿಎಂ ಉದ್ಧವ್ ಠಾಕ್ರೆ ಎನ್‍ಐಎ ತನಿಖೆಗೆ ವಹಿಸುತ್ತಾರೆಯೇ, ಈ ಮೂಲಕ ಸತ್ಯವನ್ನು ತಿಳಿಯುವಂತೆ ಮಾಡುತ್ತಾರೆಯೇ ಎಂದು ಸಿ.ಟಿ.ರವಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಮುಕೇಶ್ ಅಂಬಾನಿ ಮನೆ ಬಳಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರ್ ನಲ್ಲಿ ಜೆಲಿಟಿನ್ ಪತ್ತೆಯಾದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಕಾರು ಮಾಲೀಕ ಮನ್ಸುಕ್ ನಿನ್ನೆಯಷ್ಟೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ ಮನ್ಸುಕ್ ಹಿರೆನ್ ಥಾಣೆ ಕ್ರೀಕ್ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದು, ಕಲ್ವಾ ಕ್ರೀಕ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಥಾಣೆ ಡಿಸಿಪಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರು ಅಸಹಜ ಸಾವು ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಮನೆ ಬಳಿ ಜಿಲೆಟಿನ್ ಕಡ್ಡಿಗಳಿದ್ದ ಕಾರನ್ನು ನಿಲ್ಲಿಸಲಾಗಿತ್ತು. ಅಲ್ಲದೆ ಜೈಷ್-ಉಲ್-ಹಿಂದ್ ಇದರ ಹೊಣೆಯನ್ನು ಹೊತ್ತಿತ್ತು. ಭಯೋತ್ಪಾದನ ಸಂಘಟನೆಯು ಬಿಟ್‍ಕಾಯಿನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿತ್ತು.

ಕಳೆದ ತಿಂಗಳು ನವದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಕೈ ಜೋಡಿಸಿದೆ. ಆದರೆ ಈ ವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಉಗ್ರ ಸಂಘಟನೆ ಟೆಲಿಗ್ರಾಂ ಮೂಲಕ ತಿಳಿಸಿತ್ತು.

ಮಾರ್ಚ್ 1ರಂದು ಮತ್ತೆ ಹೇಳಿಕೆ ನೀಡಿ, ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಜೈಷ್-ಉಲ್-ಹಿಂದ್ ಹೆಸರಿನಲ್ಲಿ ಹಂಚಿಕೊಂಡ ಹಿಂದಿನ ಸಂದೇಶ ನಕಲಿ ಎಂದು ಹೇಳಿತ್ತು.

ಭಯೋತ್ಪಾದನಾ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಬೇಕೆಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದರು. ಇದೀಗ ಎನ್‍ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಒತ್ತಾಯಿಸಿದೆ.

ಹಿರೆನ್ ಹೇಳಿದ್ದು ಏನು?
ಈ ಬಗ್ಗೆ ಹೇಳಿಕೆ ನೀಡಿದ್ದ ಮನ್ಸೂಕ್ ಹಿರೆನ್, ವರ್ಷಕ್ಕೂ ಹೆಚ್ಚು ದಿನಗಳಿಂದ ಕಾರನ್ನು ಬಳಸುತ್ತಿರಲಿಲ್ಲ. ಇತ್ತೀಚೆಗೆ ಕಾರನ್ನು ಮಾರಬೇಕು ಎಂಬ ಉದ್ದೇಶದಿಂದ ಹೊರಗಡೆ ತೆಗೆದಿದ್ದೆ. ಆದರೆ ದಾರಿ ಮಧ್ಯೆ ಕಾರು ಕೆಟ್ಟು ನಿಂತಿತ್ತು. ಹೀಗಾಗಿ ಫೆಬ್ರವರಿ 16ರಂದು ಮುಲುಂದ್ ಏರೋ ಲಿಂಕ್ ರಸ್ತೆ ಬಳಿ ಪಾರ್ಕ್ ಮಾಡಿದೆ. ಬಳಿಕ ಮರುದಿನ ಸ್ಥಳಕ್ಕೆ ಆಗಮಿಸಿದಾಗ ಸ್ಕಾರ್ಪಿಯೋ ಕಾರನ್ನು ಯಾರೋ ಕದ್ದಿದ್ದರು ಎಂದು ಹಿರೆನ್ ಪೊಲೀಸರಿಗೆ ತಿಳಿಸಿದ್ದ. ಕಾರ್ ಕದ್ದಿರುವ ಬಗ್ಗೆ ಮನ್ಸುಕ್ ಹಿರೆನ್ ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *