ಮನೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಹೊರಬರದಿದ್ದಕ್ಕೆ ಗೆಳತಿಯ ಮಗಳ ಹತ್ಯೆಗೈದ!

Public TV
2 Min Read

– ತ್ರಿಕೋನ ಸಂಬಂಧದಿಂದ 6ರ ಬಾಲಕಿಯ ಕತ್ತು ಕೊಯ್ದ!

ಹೈದರಾಬಾದ್: ಮಹಿಳೆಯ ಸ್ನೇಹಿತನೇ ಆಕೆಯ ಆರು ವರ್ಷದ ಮಗಳನ್ನು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಕರುಣಾಕರ್ ಬಾಲಕಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಅಲ್ಲದೇ ಮಗುವಿನ ತಾಯಿ ಮತ್ತು ಆಕೆಯ ಸ್ನೇಹಿತ ರಾಜಶೇಖರ್ ಮೇಲೂ ಹಲ್ಲೆ ಮಾಡಿದ್ದಾನೆ. ಕೊನೆಗೆ ತಾನು ಕೂಡ ಕತ್ತನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯಕ್ಕೆ ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?
2011ರಲ್ಲಿ ಭುವನಗಿರಿ ಮೂಲದ ವ್ಯಕ್ತಿ ಆಂಧ್ರಪ್ರದೇಶದ ಅನಂತಪುರದ ಯುವತಿಯನ್ನು ವಿವಾಹವಾಗಿದ್ದರು. ಈ ದಂಪತಿಗೆ ಆರು ವರ್ಷದ ಮಗಳಿದ್ದಾಳೆ. ಇವರಿಬ್ಬರು ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ನಂತರ ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಮನೆಯವರು ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆ ಮಾಡಿಸಿದ್ದರು. ಮಹಿಳೆಯ ಪತಿ ಭುವನಗಿರಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮಹಿಳೆ ಕೆಲವು ತಿಂಗಳ ಹಿಂದೆ ಫೇಸ್‍ಬುಕ್ ಮೂಲಕ ಆರೋಪಿ ಕರುಣಾಕರ್ ಸ್ನೇಹಿತನಾಗಿದ್ದನು. ನಂತರ ಕರುಣಾಕರ್ ತನ್ನ ಸ್ನೇಹಿತ ರಾಜಶೇಖರ್ ನನ್ನು ಮಹಿಳೆಗೆ ಪರಿಚಯ ಮಾಡಿಸಿಕೊಟ್ಟಿದ್ದನು. ಸ್ವಲ್ಪ ದಿನಗಳ ನಂತರ ಮಹಿಳೆ ಮತ್ತು ರಾಜಶೇಖರ್ ತುಂಬಾ ಆತ್ಮೀಯರಾಗಿದ್ದರು. ಅಲ್ಲದೇ ಕರುಣಾಕರ್ ಬಳಿ ಮಹಿಳೆ ಮಾತನಾಡುವುದನ್ನು ಕಡಿಮೆ ಮಾಡಿದ್ದಳು. ಇದರಿಂದ ಕೋಪಗೊಂಡ ಕರುಣಾಕರ್ ಮಹಿಳೆಯ ಮನೆಗೆ ಗುರುವಾರ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕರುಣಾಕರ್ ಮಹಿಳೆಯ ಮನೆಗೆ ಬರುವ ಮೊದಲೇ ರಾಜಶೇಖರ್ ಮನೆಯಲ್ಲಿದ್ದನು. ಇದನ್ನು ತಿಳಿದು ಕರುಣಾಕರ್ ಕೋಪಗೊಂಡು ಮನೆಗೆ ನುಗ್ಗಿದ್ದಾನೆ. ಮಹಿಳೆ ಕರುಣಾಕರ್ ಬರುವುದನ್ನು ನೋಡಿ ರಾಜಶೇಖರ್ ನನ್ನು ಬಾತ್‍ರೂಮಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಹೇಳಿದ್ದಾಳೆ. ಆಗ ಕರುಣಾಕರ್, ರಾಜಶೇಖರ್ ನನ್ನು ಹೊರಗೆ ಬರುವಂತೆ ಹೇಳಿದ್ದಾನೆ. ಹೊರಗೆ ಬರದಿದ್ದರೆ ಬಾಲಕಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ವೇಳೆ ಮಗಳ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಮಹಿಳೆ ಪ್ರಯತ್ನಿಸಿದ್ದಾಳೆ. ಆಗ ಆಕೆಯ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ಮಾಡುತ್ತಿದ್ದಾನೆ. ಕೊನೆಗೆ ಬಾಲಕಿಯ ಕತ್ತನ್ನು ಕೊಯ್ದಿದ್ದಾನೆ. ಇದರಿಂದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಆಗ ರಾಜಶೇಖರ್ ಬಾತ್‍ರೂಮಿನಿಂದ ಹೊರ ಬಂದಿದ್ದಾನೆ. ನಂತರ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದು, ಕೊನೆಗೆ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ಗಲಾಟೆಯನ್ನು ನೋಡಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಆರೊಪಿಯನ್ನು ವಶಕ್ಕೆ ಪಡೆದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಅಷ್ಟರಲ್ಲಿಯೇ ಮೃತಪಟ್ಟಿತ್ತು. ಗಾಯಗೊಂಡ ಮಹಿಳೆ ಮತ್ತು ರಾಜಶೇಖರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕರುಣಾಕರ್ ಸ್ಥಿತಿ ಗಂಭೀರವಾಗಿದ್ದು, ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕರುಣಾಕರ್, ರಾಜಶೇಖರ್ ಮತ್ತು ಮಹಿಳೆಯ ವಿಚಾರವನ್ನು ಪತಿಗೆ ತಿಳಿಸಲಾಗಿದೆ. ಈ ಘಟನೆ ನಡೆದಾಗ ಪತಿ ಕೆಲಸಕ್ಕೆ ಹೋಗಿದ್ದರು ಎಂದು ಡಿಸಿಪಿ ರಕ್ಷಿತಾ ಕೆ. ಮೂರ್ತಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *